ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಸರಣಿ ೪ ಡಾ. ಎಚ್. ನರಸಿಂಹಯ್ಯ - ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ?

ನಮಗೆಲ್ಲ ತಿಳಿದಿರುವಂತೆ ಜ್ಯೋತಿಷ್ಯದ ಪ್ರಕಾರ ಮನುಷ್ಯನ ನಡವಳಿಕೆಗಳ ಮೇಲೆ ಗ್ರಹಗಳ ಪ್ರಭಾವ ವ್ಯಾಪಕವಾದದ್ದು. ಶತಮಾನಗಳಿಂದ ಜನಪ್ರಿಯವಾಗಿರುವ ಈ ನಂಬಿಕೆ ಎಲ್ಲ ದೇಶದ ಜನರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ. ಪ್ರಕೃತಿಯ ಘಟನೆಗಳು ಆದಿಮಾನವನಿಗೆ ಭಯ ಭಕ್ತಿಯನ್ನುಂಟು ಮಾಡಿದ್ದು, ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡವು. ಮಿಂಚು ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನುಂಟು ಮಾಡಿರಬೇಕು. ಮಧ್ಯಾನದಲ್ಲಿ ಗ್ರಹಣ ನಡೆದಾಗ ಕತ್ತಲು ಮುಸುಕಿದ್ದು ಎಂತಹ ದೈರ್ಯಶಾಲಿಯಾದ ಆದಿಮಾನವನಿಗೂ ನಡುಕವನ್ನುಂಟು ಮಾಡಿರ ಬೇಕು. ಭೂಕಂಪವು ಅವನಿಗೆ ಹೆಚ್ಚಿನ ದಿಗಿಲನ್ನು ತಂದಿರಬೇಕು. ಕನಸು, ರೋಗಗಳು, ಸಾವು- ಇವೆಲ್ಲಾ ಅವನಿಗೆ ರಹಸ್ಯಗಳಾಗಿರ ಬೇಕು.

ಪ್ರಾಚೀನ ಜೋತಿಷ್ಯದ ಉಗಮವು ಖಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ. ಖಗೋಳಶಾಸ್ತ್ರವು ವಿಜ್ಞಾನವಾದ್ದರಿಂದ ಅದು ಬೆಳೆಯುತ್ತಾ ಬಂದಿದೆ. ವಿಜ್ಞಾನದ ಎಲ್ಲ ಪ್ರಯೋಗಗಳು, ತಾತ್ಕಾಲಿಕವಾಗಿದ್ದು, ಅಧಿಕಾರಮುಕ್ತವಾಗಿ ಕುರುಡಾಗಿ ಅದು ಮಾತನಾಡುವುದಿಲ್ಲ. ವಿಜ್ಞಾನದ ಎಲ್ಲ ಸಿದ್ಧಾತಂಗಳು, ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್ ರಚಿತವಾಗುತ್ತವೆ. ಯಾವುದೇ ಒಂದು ವಿಷಯ ವಿಜ್ಞಾನವೆನಿಸಿಕೊಳ್ಳಬೇಕಾದರೆ ಅದು ವಸ್ತುನಿಷ್ಠತೆ, ಪುನಾರವೃತ್ತಿ ಸಾಮರ್ಥ್ಯ, ದೃಡತೆ, ವಿಶ್ವಮಾನ್ಯತೆ- ಈ ಎಲ್ಲ ರೀತಿಯ ಅಂಶಗಳನ್ನು ತೃಪ್ತಿಪಡಿಸ ಬೇಕಾಗುತ್ತದೆ. ವಿಜ್ಞಾನದ ಎಲ್ಲ ಶಾಖೆಗಳು ಅಪೂರ್ಣತೆಯಲ್ಲಿಯೇ ಆರಂಭವಾಗುತ್ತವೆ. ಇದಕ್ಕೆ ಕಾರಣ ಜ್ಞಾನದ ಮಿತಿ ಮತ್ತು ಆ ಕಾಲದಲ್ಲಿ ಬಳಕೆಯಲ್ಲಿದ್ದ ಒರಟಾದ ಉಪಕರಣಗಳು, ಕೆಲವು ಸಂದರ್ಭಗಳಲ್ಲಿ ತಪ್ಪು ಗ್ರಹಿಕೆಗೆಳು ಕೂಡ ಈ ಬಗೆಯ ಅಪೂರ್ಣತೆಗೆ ಕಾರಣವಾಗುತ್ತವೆ. ಆದರೆ ನಿರಂತರ ಸತ್ಯಶೋಧನೆಯ ಹಂಬಲ ವಿಜ್ಞಾನದ ಮಹೋನ್ನತಿಯಾಗಿದೆ.

ವಿಜ್ಞಾನದ ಇತರ ಶಾಖೆಗಳಂತೆ ಪ್ರಾಚೀನ ಖಗೋಳಶಾಸ್ತ್ರ ಸಹ ಹಲವಾರು ತಪ್ಪುಗ್ರಹಿಕೆಗಳನ್ನು ಪಡೆದುಕೊಂಡಿತ್ತು. ನಕ್ಷತ್ರ ಖಚಿತವಾದ ಆಕಾಶ ಮತ್ತು ಚಂದ್ರ ಮೊದಲಿನಿಂದಲೂ ಮನುಷ್ಯನನ್ನು ಆಕರ್ಷಿಸಿದ್ದವು ಕುತೂಹಲ ಮತ್ತು ಸೂಕ್ಷ್ಮ ನಿರೀಕ್ಷಣಾ ಶಕ್ತಿಯಿರುವ ಜನರು ಅವುಗಳ ಬಗ್ಗೆ ಮತ್ತಷ್ಟು ತಿಳಿಯಲು ಪ್ರಯತ್ನಿಸಿದರು. ಆಗ ವಿಷಯವನ್ನು ತಿಳಿಯಲು ಅವರಿಗೆ ಕಣ್ಣು ಮಾತ್ರ ಏಕೈಕ ಸಾಧನೆಯಾಗಿತ್ತು. ಪ್ರಾಚೀನ ಖಗೋಳಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಿವೆ. ಅವು ಸೂರ್ಯ, ಚಂದ್ರ, ರಾಹು, ಕೇತು, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ. ಆದರೆ ಸೂರ್ಯ-ಚಂದ್ರರು ಗ್ರಹಗಳಲ್ಲ, ಸೂರ್ಯ ನಕ್ಷತ್ರವಾದರೆ ಚಂದ್ರ ಉಪಗ್ರಹ. ಇದರ ಜೊತೆಗೆ ರಾಹು ಕೇತುಗಳು ಆಸ್ತಿತ್ವದಲ್ಲಿ ಇಲ್ಲದೆ ಇರುವವು. ಅವು ಅವರ ಕಲ್ಪನೆಯ ಕೃತಕ ಬಿಂದುಗಳು. ಜ್ಯೋತಿಷ್ಯದ ಆಧಾರವಾಗಿರುವ ಒಂಬತ್ತು ಗ್ರಹಗಳಲ್ಲಿ ಎರಡು ಗ್ರಹಗಳೇ ಅಲ್ಲ, ಮತ್ತೆರಡು ಇಲ್ಲವೇ ಇಲ್ಲ. ಇದಲ್ಲದೆ ಜ್ಯೋತಿಷಿಗಳಿಗೆ ನಿಖರವಾದ ಕಾಲದ ಪರಿಕಲ್ಪನೆ ಇರಲಿಲ್ಲವಾದರೂ, ಅದರ ಪ್ರಾಮುಖ್ಯ ಜ್ಯೋತಿಷ್ಯದಲ್ಲಿ ಹೆಚ್ಚಾಗಿದೆ. ಈ ಎಲ್ಲ ಕಾರಣಗಳು ಜ್ಯೋತಿಷ್ಯಕ್ಕೆ ತಪ್ಪಾದ ದುರ್ಬಲ ಅಡಿಪಾಯವನ್ನು ಒದಗಿಸಿವೆ. ಈ ರೀತಿಯ ತಪ್ಪು ಗ್ರಹಿಕೆಗಳ ಆಧಾರದಿಂದ ರಚಿತವಾಗಿರುವ ಜ್ಯೋತಿಷ್ಯವನ್ನು ವಿಜ್ಞಾನವೆಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ವಿಜ್ಞಾನದ ಪ್ರಕಾರ ಗ್ರಹಗಳು ಸೂರ್ಯನ ಭಾಗಗಳು. ಆದ್ದರಿಂದ ಅವುಗಳು ಸೂರ್ಯನ ರೀತಿಯ ಭೌತಿಕ ಸ್ವರೂಪವನ್ನೇ ಪಡೆದುಕೊಂಡಿವೆ. ಭೂತವಸ್ತುವಿನ ದೊಡ್ಡ ರಾಶಿಗಳಾಗಿರುವ ಗ್ರಹಗಳು ಭೂಮಿಯಿಂದ ಮಿಲಿಯನ್‌ಗಟ್ಟಲೆ ಮೈಲಿಗಳ ದೂರದಲ್ಲಿವೆ. ಇವು ಮನುಷ್ಯನ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಗ್ರಹಿಸಲು ಅಸಾಧ್ಯ. ಮನುಷ್ಯನ ಎಲ್ಲ ಗುಣಗಳನ್ನು ಗ್ರಹಗಳಿಗೆ ಆರೋಪಿಸವುದು ಹಾಸ್ಯಾಸ್ಪದ. ಗ್ರಹಗಳ ಸ್ಥಾನಗಳು, ಶುಭ, ಅಶುಭ, ಸ್ನೇಹಪರ, ಶತ್ರುಗಳು, ಸೇಡಿನ ಭಾವನೆಯನ್ನು ಹೊಂದುವವು ಆಗುತ್ತವೆ ಎಂಬ ನಂಬಿಕೆ ಪ್ರಚಲಿತವಾಗಿದೆ. ನಮ್ಮ ಪ್ರಾಚೀನ ಜನಾಂಗದಲ್ಲಿ ತಪ್ಪಾಗಿ, ಒರಟು ಒರಟಾಗಿ ರೂಪಗೊಂಡ ವಿಚಾರಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲೂ ಹೆಚ್ಚಿನ ಪ್ರಭಾವವನ್ನು ಬೀರುತ್ತಿರುವುದು ದುರದೃಷ್ಟಕರ. ಸತ್ಯದ ಶೋಧನೆಗೆ ವಿಜ್ಞಾನದ ಮಾರ್ಗಗಳು ಪ್ರಬಲವಾದ ಸಾಧನಗಳು. ಈ ವಿಧಾನಗಳನ್ನು ಜ್ಯೋತಿಷ್ಯದ ಸತ್ಯಸಂಧತೆ ಅಥವಾ ಅಸತ್ಯವನ್ನು ನಿರ್ಧರಿಸಲು ಸಮರ್ಪಕವಾಗಿ ಉಪಯೋಗಿಸಿಕೊಳ್ಳ ಬಹುದು.

ಜ್ಯೋತಿಷ್ಯವು ರಾಹುಕಾಲ, ಗುಳಿಕಾಲ ಮತ್ತು ಯಮಗಂಡಕಾಲ ಈ ಮೂರು ಅಂಶಗಳನ್ನು ಅಡಿಪಾಯವಾಗಿ ಹೊಂದಿದೆ. ರಾಹು, ಕೇತು ಆಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ, ಗುಳಿಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಪ್ರಯಾಣ, ಮದುವೆ, ಧಾರ್ಮಿಕ ಕಾರ್ಯ ಈ ಬಗೆಯ ಶುಭಕಾರ್ಯಗಳನ್ನು ನಡೆಸ ಬಾರದು. ಈ ನಂಬಿಕೆ ನಿಜವಾದ ಪಕ್ಷದಲ್ಲಿ ರಾಹುಕಾಲದಲ್ಲಿ ಹೊರಟ ವಿಮಾನಗಳು, ರೈಲುಗಳು, ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು. ಅಪಘಾತಗಳ ಸ್ವರೂಪವನ್ನು ಸ್ಥೂಲವಾಗಿ ಪರೀಕ್ಷಿಸಿ ನೋಡಿದರೂ ಕೂಡ, ಅಪಘಾತಗಳಿಗೂ ವಾಹನಗಳು ಹೊರಟಕಾಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಶಯವಿಲ್ಲದೆ ಗೊತ್ತಾಗುತ್ತದೆ. ನ್ಯೂಯಾರ್ಕ, ಚಿಕಾಗೋ, ಲಂಡನ್ ಅಂತಹ ವಿಮಾನ ನಿಲ್ದಾಣಗಳಲ್ಲಿ ಯಾವಾಗಲೂ ವಿಮಾನಗಳು ಬಂದು ಹೋಗುತ್ತಿರುತ್ತವೆ. ಅವುಗಳು ರಾಹುಕಾಲವನ್ನು ತಪ್ಪಿಸಲು ಕಾಯುವುದಿಲ್ಲ. ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ. ಆದರೆ ಎಲ್ಲ ದಿನಗಳು ಅಶುಭವಾದವು ಅಥವಾ ಶುಭವಾದವು ಎಂದು ತೋರಿಸಲು ಕಷ್ಟಪಡಬೇಕಾಗಿಲ್ಲ.

ಜಾತಕಗಳು ಕೂಡ ಜ್ಯೋತಿಷ್ಯದ ಆಧಾರಗಳ ಮೇಲೆ ರಚಿತವಾಗಿತ್ತವೆ. ವ್ಯಕ್ತಿಯು ಹುಟ್ಟಿದಾಗ ಕಂಡುಬರುವ ಗ್ರಹಗತಿಗಳ ಆಧಾರದಿಂದ ಜಾತಕಗಳನ್ನು ಬರೆಯಲಾಗುತ್ತದೆ. ವ್ಯಕ್ತಿಯ ಜೀವನದ ಎಲ್ಲ ಪ್ರಮುಖ ಘಟ್ಟಗಳು ಅದರಲ್ಲಿ ಸುರಕ್ಷಿತವಾಗಿ ಅಡಕವಾಗಿರುತ್ತದೆ ಎಂದು ನಂಬಿಕೆ ಇದೆ. ಗ್ರಹಗಳ ಸ್ಥಾನವು ವಿದ್ಯಾಭ್ಯಾಸ, ಮದುವೆ, ವಿದೇಶ ಪ್ರಯಾಣ, ಅಪಘಾತ, ಸಾವು ಇವುಗಳನ್ನೆಲ್ಲಾ ನಿರ್ಧರಿಸುತ್ತದೆ ಎಂದು ನಂಬುವುದು ಅರ್ಥರಹಿತ. ವಧು-ವರರಿಗಿಂತ ಗ್ರಹಗಳ ಪಾತ್ರ ಮದುವೆಯ ವ್ಯವಹಾರಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಕೆಲವು ಜಾತಕಗಳು, ತಮ್ಮ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಅವು ಭಾವಿ ಅತ್ತೆ ಅಥವಾ ಮಾವನ ಮೇಲೆ ದೃಷ್ಪರಿಣಾಮ ಬೀರುತ್ತವೆ ಎಂದು ತಿಳಿಸುತ್ತದೆ. ಆ ಗ್ರಹಗಳ ದುಷ್ಪರಿಣಾಮವನ್ನು ತಪ್ಪಿಸುವುದಕ್ಕಾಗಿ ತಂದೆ ಅಥವಾ ತಾಯಿ ಬದುಕಿಲ್ಲದೆ ಇರುವ ವಧು-ವರರನ್ನು ಹುಡುಕಲಾಗುತ್ತದೆ.

ವಧು-ವರರ ಜಾತಕಗಳು ಅತ್ಯಂತ ಸಮರ್ಪಕವಾಗಿ ಕೂಡಿ ಬಂದಿದ್ದನ್ನು ಗಮನಿಸಿಯೇ ಆದ ಎಷ್ಟೋ ಮದುವೆಗಳು ಯಶಸ್ವಿಯಾಗಿ ಇಲ್ಲದೆ ಇರುವುದಕ್ಕೆ ನಿದರ್ಶನಗಳಿವೆ. ಈ ಗುಂಪಿನಲ್ಲಿ ಜಾತಕ ಸೂಚಿಸುವುದಕ್ಕಿಂತ ಮುಂಚೆಯೇ ಕಂಡುಬರುವ ವಿಧವೆ-ವಿಧುರರು ದೊರೆಯುತ್ತಾರೆ. ಸಾಮಾನ್ಯವಾಗಿ ಪ್ರಸಿದ್ಧ ಜ್ಯೋತಿಷಿಗಳು ಬಹಳ ಮಟ್ಟಿನ 'ನಂಬಿಕೆ' ಗೆ ಅರ್ಹರೆಂದು ಭಾವಿಸಲಾಗುತ್ತಿದೆ. ಆದರೆ ಇವರ ಲೆಕ್ಕಾಚಾರಗಳು ಸುಳ್ಳಾಗುವುದು ಬೇಕಾದಷ್ಟು ಸಾರಿ ಕಂಡುಬರುತ್ತದೆ. ಪ್ರಸಿದ್ಧ ಜ್ಯೋತಿಷಿಗಳು ಒಪ್ಪಿದ ಜಾತಕಗಳ ಪ್ರಕಾರ ನಡೆದ ಮದುವೆಗಳಲ್ಲೂ ಅನಿರೀಕ್ಷಿತ ದುರಂತಗಳು, ಸಂಸಾರ ವಿರಸ, ತಪ್ಪು ತಿಳುವಳಿಕೆ, ಅಸುಖವು ಕಂಡಬುವುದರಿಂದ ಅವರನ್ನು ನಂಬಿಕೆಗೆ ಅನರ್ಹರಾದ ಜ್ಯೋತಿಷಿಗಳ ಸಾಲಿನಲ್ಲಿಯೇ ಸೇರಿಸಬೇಕಾಗುತ್ತದೆ. ಜಗತ್ತಿನಲ್ಲಿಯೇ ಶೇ ೯೦ಕ್ಕೆ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ. ಅವರ ವಿವಾಹಗಳು ಉಳಿದವರಂತೆ ಸುಖವೋ ಅಥವಾ ಅಸುಖವೋ ಆಗಿರುತ್ತದೆ. ಹೀಗೆ ವಿಶ್ವಮಾನ್ಯತೆ ಇಲ್ಲದೆ ಇರುವ ಜ್ಯೋತಿಷ್ಯ ಎಂದಿಗೂ ವಿಜ್ಞಾನ ಆಗಲಾರದು.

ಪ್ರಕೃತಿಯ ವಿಕೋಪದ ಸಂದರ್ಭದಲ್ಲಿ ಕಾಣುವ ಸಾವಿನ ಸನ್ನಿವೇಶಗಳು ವಿಶ್ಲೇಷಿಸಿದಾಗ ಕೂಡ ಈಗಾಗಲೇ ದುರ್ಬಲರಾಗಿರುವ, ತಪ್ಪುದಾರಿಯಲ್ಲಿ ಹೋಗುತ್ತಿರುವ ಜ್ಯೋತಿಷ್ಯದ ಮೇಲೆ ಮಾರಕ ಪರಿಣಾಮಗಳನ್ನುಂಟು ಮಾಡುತ್ತದೆ. ವಿಮಾನ ಅಪಘಾತದಲ್ಲಿ ಸತ್ತ ಎಲ್ಲ ದುರದೃಷ್ಟಶಾಲಿಗಳ ಜಾತವಕವೂ ಒಂದೇ ಸೂಚನೆಯನ್ನು ಕೊಡುತ್ತದೆ ಎಂದು ಅಭಿಪ್ರಾಯಪಡುವುದು ತೀರ ಅಸಂಗತ. ಇದೇ ರೀತಿ ಚಂಡಮಾರುತ ಅಥವಾ ಭೂಕಂಪಕ್ಕೆ ಬಲಿಯಾದ ಎಲ್ಲ ವ್ಯಕ್ತಿಗಳ ಜಾತಕದಲ್ಲೂ ಅವನ ಸಾವಿನ ದಿನ ಒಂದೇ ರೀತಿಯಲ್ಲಿ ಸೂಚಿತವಾಗಿರುತ್ತದೆ ಎಂದು ಹೇಳುವುದು ಅಷ್ಟೆ ಅಸಂಬದ್ಧವಾದುದು.

ಜ್ಯೋತಿಷ್ಯದ ಪ್ರಕಾರ ಚಂಡಮಾರುತ್ತಕ್ಕೆ ಅಥವಾ ಭೂಕಂಪಕ್ಕೆ ಬುದ್ಧಿವಂತಿಕೆ ಹಾಗೂ ಸಮಯೋಚಿತ ಬುದ್ಧಿ ಇರಬೇಕು. ಅವು ಯಾವ ಜಾತಕಗಳಲ್ಲಿ ಒಂದೇ ದಿನ ಸಾವಿನ ಭವಿಷ್ಯ ಬರೆದಿದೆಯೊ ಅಂತಹವರನ್ನು ಮಾತ್ರ ಹುಡಿಕಿಕೊಂಡು ಮರಣಕ್ಕೆ ಕಾರಣವಾಗಬೇಕು. ಚಂಡಮಾರುತ ಬೀಸಿದ ಪ್ರದೇಶಗಳಲ್ಲಿ ಸುರಕ್ಷಿತವಾದ ಮನೆಗಳಲ್ಲಿ ವಾಸಮಾಡುವ ಶ್ರೀಮಂತರ ಅಥವಾ ಭೂಕಂಪಗಳಿಂದ ರಕ್ಷಿಸಲ್ಪಡುವ ಪ್ರದೇಶಗಳಲ್ಲಿ ಇರುವ ಪ್ರದೇಶದ ಜನರ ಜಾತಕಗಳು ಸಾವಿಗೀಡಾದ ಬಡವರಿಗಿಂತ ಉತ್ತಮ ಅದೃಷ್ಟವನ್ನು ಹೊಂದಬೇಕು. ಅವಳಿ ಮಕ್ಕಳ ಜಾತಕಗಳು ಒಂದೇ ರೀತಿಯಲ್ಲಿ ಇರುತ್ತದೆಂಬುದು ತರ್ಕ ಒಪ್ಪುವ ಮಾತು. ಆದರೆ ಅನೇಕ ಸಂದರ್ಭಗಳಲ್ಲಿ ಇಬ್ಬರ ಅವಳಿ ಮಕ್ಕಳ ಮನೋಭಾವದಲ್ಲಿ ಆಸಕ್ತಿಗಳಲ್ಲಿ ಹಾಗೂ ಸಾಧನೆಗಳಲ್ಲಿ ಅಜಗಜಾಂತರವಿರುತ್ತದೆ. ಈ ಅಂಶ ಕೂಡ ಜ್ಯೋತಿಷ್ಯದ ಟೊಳ್ಳುತನವನ್ನು ವ್ಯಕ್ತಪಡಿಸ ಬಲ್ಲದು.

ಜ್ಯೋತಿಷಿಗಳ ಭವಿಷ್ಯವಾಣಿಯು ಓದಲು ತಮಾಷೆಯಾಗಿರುತ್ತದೆ. ಅವು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇದ್ದು, ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುತ್ತಿರುತ್ತವೆ. ದಿನ ಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ಕಂಡುಬರುವ ಭವಿಷ್ಯದ ಸ್ವರೂಪ ಎಲ್ಲ ವಾರಗಳಲ್ಲೂ ಒಂದೇ ರೀತಿಯ ಸ್ಥೂಲವಿವರಣೆಯನ್ನು ಹೊಂದಿರುತ್ತದೆ. ಚುನಾವಣೆಯ ಮೊದಲ ಸಮೀಕ್ಷೆಯಷ್ಟೇ ಊಹೆಗೆ ಒಳಪಟ್ಟಿರುತ್ತದೆ. ಆದರೆ ಜ್ಯೋತಿಷಿ ತನ್ನ ಭವಿಷ್ಯದಲ್ಲಿ ಅಲ್ಲಲ್ಲಿ ಬುಧ, ಶನಿ, ರಾಹು, ಇತ್ಯಾದಿಗಳ ಪ್ರಭಾವವನ್ನು ಸೂಚಿಸಿರುತ್ತಾನೆ ಅಷ್ಟೆ.

ಇಬ್ಬರು ಜ್ಯೋತಿಷಿಗಳ ಅಭಿಪ್ರಾಯಗಳಲ್ಲಿ ಸಾಮಾನ್ಯವಾಗಿ ಯಾವ ಹೊಂದಿಕೆಯೂ ಇರುವುದಿಲ್ಲ. ಇಬ್ಬರಿಗೂ ತಮ್ಮದೆ ಆದ ಜ್ಯೋತಿಶಾಸ್ತ್ರವಿರಬೇಕೆಂದು ತೋರುತ್ತದೆ. ಹೀಗಿದ್ದರೂ ಜ್ಯೋತಿಷ್ಯ ವಿಜ್ಞಾನದ ಪಟ್ಟ ಪಡೆದುಕೊಳ್ಳಬೇಕು.

ಇಬ್ಬರು ಜ್ಯೋತಿಷಿಗಳ ಭವಿಷ್ಯದಲ್ಲಿ ಭಿನ್ನಾಭಿಪ್ರಾಯ ಇರುವುದು ಇರಲಿ, ಒಬ್ಬನೇ ಜ್ಯೋತಿಷಿಯ ಭವಿಷ್ಯವು ಕೂಡ ಗೊಂದಲದಿಂದ ಕೂಡಿದ್ದು ಸತ್ಯಕ್ಕೆ ಬಹಳ ದೂರದಲ್ಲಿ ಇರುತ್ತದೆ. ಎಲ್ಲ ರೀತಿಯ ಸಾಧ್ಯತೆಗಳ ಬಗ್ಗೆಯೂ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾಗ ಯಾರಾದರೂ ಒಬ್ಬರ ಮಾತು ನಿಜವಾಗಿ ನಡೆಯುವ ಸಂಗತಿಗಳೊಂದಿಗೆ ಸರಿಹೊಂದುವುದು ಆಶ್ಚರ್ಯವೇನೂ ಅಲ್ಲ. ಇದು ಜ್ಯೋತಿಷ್ಯದ ಅದಿಕೃತತೆಯನ್ನು ಸೂಚಿಸುವುದಿಲ್ಲ. ಕೆಟ್ಟುಹೋದ ಗಡಿಯಾರ ಕೂಡ ದಿನದಲ್ಲಿ ಎರಡು ಸಾರಿ ಸರಿಯಾದ ವೇಳೆ ಸೂಚಿಸುತ್ತದೆ. ಕೋತಿಯೊಂದು ಟೈಪ್‌ರೈಟರ್‌ನ ಅಚ್ಚಿನ ಮೊಳೆಯನ್ನು ಒತ್ತುವಂತೆ ಮಾಡಿದಾಗ ಅದು ಅಕಸ್ಮಿಕವಾಗಿ ಯಾವುದೋ ಒಂದು ಪದ ಅಥವಾ ಷೇಕ್ಸ್‌ಪಿಯರ್‌ನ ದ್ವಿಪದಿಯೇ ಆಗಿರಬಿಡಬಹುದು. ಹೀಗೆಂದ ಮಾತ್ರಕ್ಕೆ ಕೋತಿಗೆ ಟೈಪಿಂಗ್ ಕಲೆ ಅಥವಾ ಷೇಕ್ಸ್‌ಪಿಯರ್‌ನ ಪರಿಜ್ಞಾನ ಇದೆಯೆಂದು ಅರ್ಥವಲ್ಲ.

ಕೆಲವು ಸಂದರ್ಭಗಳಲ್ಲಿ ಮುಂದಿನ ವರ್ಷದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳ ಸಾವಿನ ಸೂಚನೆಯಿಂದ ಎಂಬಂತಹ ಭವಿಷ್ಯವಾಣಿಯನ್ನು ನೋಡುತ್ತೇವೆ. ಒಂದು ವರ್ಷದಲ್ಲಿ ಇಬ್ಬರು ಸಾಯುವುದು ಖಚಿತ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ದೊಡ್ಡ ವ್ಯಕ್ತಿಗಳಾದ್ದರಿಂದ ಜ್ಯೋತಿಷಿಯ ಭವಿಷ್ಯ ನಿಜವಾಲೇಬೇಕು. ಹೆಣ್ಣುಮಕ್ಕಳಿಗೆ ಜನ್ಮವಿತ್ತ ತಾಯಿಯೊಬ್ಬಳಿಗೆ ಜ್ಯೋತಿಷಿಯೊಬ್ಬರು ಈ ಸಾರಿ ಗಂಡುಮಗುವಿನ ಜನನವಾಗುತ್ತದೆ ಎಂಬ ಭವಿಷ್ಯ ನುಡಿದಿದ್ದರು. ಸಂಭ್ರಮದಲ್ಲಿದ್ದ ಆಕೆ ಮತ್ತೆ ಹೆಣ್ಣುಮಗುವಿನ ತಾಯಿಯಾದಳು. ಬೇಜಾರಿನಿಂದ ಅವಳು ಜ್ಯೋತಿಷ್ಯದ ಬಗ್ಗೆ ಕೋಪ ವ್ಯಕ್ತಪಡಿಸಿದಾಗ ಅವನು ಗೋಡೆಯ ಮೇಲೆ 'ಹೆಣ್ಣುಮಗು' ಎಂದು ಬರೆದಿದ್ದನ್ನು ತೋರಿಸಿ, ಪ್ರಸವದ ಸಂದರ್ಭದಲ್ಲಿ ಸಂತೋಷವಾಗಿರಲೆಂದು ಉದ್ದೇಶಪೂರ್ವಕವಾಗಿಯೇ ತಾನು ಹೀಗೆ ಹೇಳಿದ್ದೆನೆಂದು ಉತ್ತರ ಕೊಟ್ಟನಂತೆ. ಜ್ಯೋತಿಷಿ ಮತ್ತು ಭವಿಷ್ಯ ಕೇಳಿದ ವ್ಯಕ್ತಿಗಳಲ್ಲಿಯೇ ಸಮಸ್ಯೆ ಇದ್ದಾಗ ಇಂತಹ ಜಾಣತನದ ತಂತ್ರಗಳು ಸಾಮಾನ್ಯವಾಗಿ ಉಪಯೋಗವಾಗುತ್ತವೆ. 'ಇಲ್ಲಸ್ಟ್ರೇಟಡ್ ವೀಕ್ಲಿ' ಪತ್ರಿಕೆಯ ಸಂಪಾದಕೀಯವೊಂದರಲ್ಲಿ ೧೯೭೭ರ ಚುನಾವಣೆಯ ನಂತರ ಕೇಳಿ ಬಂದ ವರದಿಯ ಪ್ರಸ್ತಾಪದ ಬಗ್ಗೆ ನೆನಪಿನಿಂದ ಹೇಳುತ್ತಿದ್ದೇನೆ. ಪತ್ರಿಕೆಗೆ, ಮುಂದಿನ ಪ್ರಧಾನಿ ಯಾರೆಂಬುದರ ಬಗ್ಗೆ ವಿಭಿನ್ನವಾದ ಹಲವಾರು ಸೂಚನೆಗಳು ಜ್ಯೋತಿಷಿಗಳಿದ ಬಂದಿತ್ತು. ಅವಗಳಲ್ಲಿ ಸಂಪಾದಕರು ಗುಜರಾತ್ ರಾಜ್ಯದವರು ಪ್ರಧಾನಮಂತ್ರಿ ಆಗಬಹುದು ಎಂಬ ಸೂಚನೆಯನ್ನು ಆರಿಸಿಕೊಂಡಿದ್ದರು. ಅದರ ಪ್ರಕಾರ ಅವರು ಹೆಚ್ಚು ದಿನಗಳು ಅಧಿಕಾರದಲ್ಲಿ ಇರುವುದಿಲ್ಲ, ಗುಜರಾತ್ ಅಥವಾ ಉತ್ತರ ಪ್ರದಶದವರು ಪ್ರಧಾನಮಂತ್ರಿ ಆಗುತ್ತಾರೆ ಎಂದು ಚುನಾವಣೆಯ ನಂತರ ಹೇಳುವುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಜ್ಯೋತಿಷ್ಯದ ಜ್ಞಾನ ಬೇಕಾಗುವುದಿಲ್ಲ. ಪ್ರಧಾನಮಂತ್ರಿಯ ಅಧಿಕಾರದ ಅವಧಿಯ ಬಗ್ಗೆ ಹೇಳಿದ ಭವಿಷ್ಯ ಯಾವ ರೀತಿ ಸುಳ್ಳಾಯಿತು ಎಂಬುದು, ಜ್ಯೋತಿಷ್ಯದ ಅಸಮರ್ಥತೆಗೆ ಮತ್ತೊಂದು ನಿದರ್ಶನ. ಜ್ಯೋತಿಷ್ಯ, ಪ್ರದೇಶಗಳನ್ನು, ರಾಜಕೀಯ ಪಕ್ಷಗಳನ್ನು ಗುರುತಿಸಿಕೊಳ್ಳುವುದು ಗಮನಾರ್ಹ.

ತಪ್ಪು ಭವಿಷ್ಯ ಹೇಳುವರು ನಕಲಿ ಜ್ಯೋತಿಷಿಗಳೆಂದು, ಜ್ಯೋತಿಷಿಗಳು ಹೇಳುವದು ಉಂಟು. ನಿಖರವಾಗಿ ಯಾರೇ ಒಬ್ಬ ಜ್ಯೋತಿಷಿ ಭವಿಷ್ಯ ನುಡಿದು, ಭವಿಷ್ಯ ಸುಳ್ಳಾಗುವುದಕ್ಕೆ ತರ್ಕಬದ್ಧವಾಗಿ ಕಾರಣ ಕೊಟ್ಟರೆ ಸ್ವಲ್ಪ ಮಟ್ಟಗೆ ಜ್ಯೋತಿಷ್ಯಕ್ಕೆ ಬೆಲೆ ಕೊಡಬಹುದು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಏನೇ ತಪ್ಪಾದರೂ, ಅದರ ಬಗ್ಗೆ ಆಳವಾದ ಪರಿಶೀಲನೆ ನಡೆದು ಸೋಲಿಗೆ ಕಾರಣವನ್ನು ವಿಶ್ಲೇಷಿಸಿ ತಿದ್ದಕೊಳ್ಳಲು ಸಾಧ್ಯವಾಗುತದೆ. ನಮಗೆಲ್ಲಾ ತಿಳಿದುವಂತೆ ವಿಮಾನ ಅಪಘಾತದ ವಿವರವಾದ ತಪಾಸಣೆ ಅದರ ಮುಂದಿನ ಪ್ರಯಾಣದ ಬಗ್ಗೆ ಮತ್ತಷ್ಟು ಎಚ್ಚರಿಕೆ ತೆಗೆದುಕೊಳ್ಳುವಂತೆ ಸಹಾಯ ಆಗುತ್ತದೆ.

ಜೀವನದಲ್ಲಿ ಎಲ್ಲವೂ ಪೂರ್ವ ನಿರ್ಧಾರಿತವಾಗುತ್ತದೆಂಬ ವಿಧಿವಾದವನ್ನು ಜ್ಯೋತಿಷ್ಯ ತಿಳಿಸುತ್ತದೆ. ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಈ ನಿಯಮ ಅಷ್ಟೊಂದು ಕರಾರುವಕ್ಕಾಗಿ ಇರುವುದಿಲ್ಲ. ಆಗ ಬುದ್ಧಿವಂತ ಜ್ಯೋತಿಷಿಗಳು ಗ್ರಹಗಳ ಪ್ರಭಾವವನ್ನು ತರುತ್ತಾರೆ. ಈ ಅಂಶವನ್ನು ಜನರ ಶೋಷಣೆಗೆ ಜ್ಯೋತಿಷಿಗಳು ಉಪಯೋಗಿಸಿಕೊಳ್ಳುತ್ತಾರೆ. ಜನರು ನಿರಾಶೆಯಲ್ಲಿದ್ದಾಗ, ಸಮಸ್ಯೆಗಳಲ್ಲಿ ಇದ್ದಾಗ ಜ್ಯೋತಿಷಿಗಳ ಮೊರೆಹೋಗುತ್ತಾರೆ. ಗ್ರಹಗಳ ಅನಿಷ್ಟ ಗತಿಯಿಂದ ಉಟಾಂಗುವ ಘೋರ ಪರಿಣಾಮಗಳನ್ನು ಜ್ಯೋತಿಷಿಗಳು ಅವರಿಗ ತಿಳಿಸುತ್ತಾರೆ. ಆ ಅಮಂಗಳ ನಿವಾರಣೆಯು ಶಾಂತಿ, ಪೂಜೆಗಳಿಂದ ಪರಿಹಾರವಾಗುತ್ತದೆಂಬ ಸ್ವಾಂತನವನ್ನು ಕೊಡುತ್ತಾರೆ. ಅದಕ್ಕಾಗಿ ಖರ್ಚಾಗುವ ಹೆಚ್ಚಿನ ಹಣದ ಬಗ್ಗೆ ಹೇಳಲು ಮರೆಯುವುದಿಲ್ಲ. ಅವರ ಮಾರ್ಗದರ್ಶನವನ್ನು ಬಯಸುವ ಯಾರೂ ಅವರ ಅಭಿಪ್ರಾಯಗಳನ್ನು ತಿರಸ್ಕರಿಸುವುದಿಲ್ಲ. ಜ್ಯೋತಿಷಿಗಳ ಮಧ್ಯಸ್ಥಿಕೆಗಾರರು 'ಅಲೌಕಿಕ' ಗ್ರಹಗಳ ಪರಿಣಾಮಗಳನ್ನು ಲೌಕಿಕ ಪ್ರಯೋಜನಗಳಿಗಾಗಿ ಹೆಚ್ಚು ಕಡಿಮೆ ಮಾಡಲು ಸಮರ್ಥರಾಗಿರುತ್ತಾರೆ. ಬಹಳ ಮುಖ್ಯವಾಗಿ ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ ಅವರ ಸುಲಿಗೆಗೆ ಕಾರuವಾಗುತ್ತದೆ. ಜ್ಯೋತಿಷ್ಯ ಒಂದು ವಾಣಿಜ್ಯವಾಗಿದೆ.

ಜ್ಯೋತಿಷಿಗಳು ಹೇಳದೇ ಇದ್ದ ಹಲವಾರು ಮುಖ್ಯ ಘಟನೆಗಳು ಸಂಭವಿಸಿದ್ದು, ಗಮನಿಸಬೇಕಾದ್ದು. ಜೂನ್ ೧೯೭೫ರಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗುತ್ತದೆಂದು ಯಾವು ಜ್ಯೋತಿಷಿಯೂ ಭವಿಷ್ಯ ನುಡಿಯಲಿಲ್ಲ. ಚರಿತ್ರಾಹವಾದ ೧೯೭೭ರ ಚುನಾವಣೆಯ ಬಗ್ಗೆಯೂ ಯಾವುದೇ ಭವಿಷ್ಯ ಕೇಳಿಬರಲಿಲ್ಲ. ೨೦೦೬ರ ಗುಜರಾತ್ ಭೂಕಂಪದ ಬಗ್ಗೆಯೂ, ಹಾಗೇ ಸುನಾಮಿಯ ಬಗ್ಗೆಯೂ ಯಾರೂ ಭವಿಷ್ಯ ಹೇಳಿರಲಿಲ್ಲ, ಸುನಾಮಿಯೆಂದರೆ ಏನಂದೆ ಅಸಲಿಗೆ ಜ್ಯೋತಿಷ್ಯದವರಿಗೆ ಅದು ಉಂಟುಮಾಡಿದ ಅಫಘಾತದ ನಂತರ ಗೊತ್ತಾದದ್ದು. ದೇಶದ ಇತಿಹಾಸದ ದೃಷ್ಟಿಯಿಂದ ಮಹತ್ತರ ಪರಿಣಾಮ ಬೀರಿದ ಈ ಎರಡು ಘಟನೆಗಳ ಬಗ್ಗೆ ಏನೂ ತಿಳಿಸದೆ ಇದ್ದುದಕ್ಕೆ ಜ್ಯೋತಿಷಿಗಳು ಯಾವ ನೆಪ ಹೇಳುವರೊ ನನಗೆ ಗೊತ್ತಿಲ್ಲ. ೧೯೭೭ರ ಚುನಾವಣೆ ಫಲಿತಾಂಶದ ಬಗ್ಗೆ ಕೂಡ ಯಾರೂ ಮುನ್ಸೂಚನೆ ಕೊಟ್ಟಿರಲಿಲ್ಲ. ಸಾವಿರಾರು ಜನರಿಗೆ ಸಾವು ನೋವುಗಳನ್ನು ಉಂಟುಮಾಡಿದ ಇತ್ತೀಚಿನ ಚಂಡಮಾರುತದ ಬಗ್ಗೆ ಜ್ಯೋತಿಷಿಗಳು ಜನರಿಗೆ ಏನೂ ಸೂಚಿಸಿರಲಿಲ್ಲ.

ದಿನನಿತ್ಯದ ಘಟನೆಗಳನ್ನು ವಿಶ್ಲೇಷಿಸಿದಾಗ ಜ್ಯೋತಿಷ್ಯದ ಅಧಿಕೃತತೆ ನಿರಾಕರಣೆ ಆಗುವುದನ್ನು ಮೇಲಿನ ಎಲ್ಲ ಉದಾಹರಣೆಗಳು ತಿಳಿಸಬಲ್ಲವು. ಅನೇಕ ಜನ ಸಿಕ್ಷಣವನ್ನು ಪಡೆದವರು, ವಿಜ್ಞಾನಿಗಳು, ಜ್ಯೋತಿಷ್ಯವನ್ನು ನಂಬುವುದು ಶೋಚನೀಯ ವಿಚಾರ. ಪ್ರಯೋಗಶಾಲೆಯಲ್ಲಿ ವಿಚಾರವಾದಿಯಾದ ವಿಜ್ಞಾನಿ ಜೀವನದ ಸಮಸ್ಯೆಗಳನ್ನು ಎದುರಿಸುವಾಗ ವಿಚಾರಕ್ಕೆ ಮಂಗಳ ಹಾಡುವುದು ಕಂಡುಬರುತ್ತದೆ. ಜ್ಯೋತಿಷ್ಯವೂ ಉಳಿದ ಮೂಢನಂಬಿಕೆಗಳಂತೆ ಸ್ವತಂತ್ರ ಆಲೋಚನೆ ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆಯನ್ನು ತರುತ್ತದೆ. ಈ ರೀತಿಯ ಮೂಢನಂಬಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯವು ವಾಯು, ಜಲ, ಮಾಲಿನ್ಯಗಳಿಗಿಂತ ಹೆಚ್ಚು ಅಪಾಯಕಾರಿ.

ಖಗೋಳಸ್ತ್ರವು ವಿಜ್ಞಾನವಾಗಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಜ್ಯೋತಿಷ್ಯ ಮಾತ್ರ ತನ್ನ ಪುರಾತನ ನಂಬಿಕೆ ಹಾಗೂ ತಪ್ಪುಗ್ರಹಿಕೆಗಳನ್ನೇ ಹೊಂದಿದೆ. ಈಗಲೂ ನವಗ್ರಹಗಳು ಜ್ಯೋತಿಷ್ಯದ ದಾರಿಯನ್ನು ತೋರಿಸುತ್ತವೆ. ಇವುಗಳಲ್ಲಿ ನಾಲ್ಕು ಗ್ರಹಗಳೇ ಅಲ್ಲ. ಆದರೆ ಯುರೆನೆಸ್, ನೆಪ್ಚೂನ್, ಪ್ಲೇಟೋ ಅಂತಹ ಹೊಸ ಗ್ರಹಗಳನ್ನು ವಿಜ್ಞಾನಿಗಳು ಕಂಡಹಿಡಿದರು. ಆದರೆ ಅವು ಇನ್ನೂ ತಮ್ಮನ್ನು ಗುರುತಿಸಲು ಜ್ಯೋತಿಷ್ಯಿಗಳನ್ನೇ ಕೇಳಿಕೊಳ್ಳುತ್ತಿವೆ. ಬಹುಮಂದಿ ಜ್ಯೋತಿಷ್ಯಿಗಳಿಗೆ ಇವುಗಳ ಆಸ್ತಿತ್ವದ ವಿಚಾರವೇ ತಿಳಿದಿಲ್ಲ.

ನಮ್ಮ ದೇಶದಲ್ಲಿ ಸಾಮಾಜಿಕ ಕೆಳಸ್ತರದಿಂದ ಬಂದ ಜನರು ಶಿಕ್ಷಣವನ್ನು ಮೊದಲ ಬಾರಿಗೆ ಪಡೆದುಕೊಂಡಾಗ ಅವರಲ್ಲಿ ರೂಪಗೊಳ್ಳುತ್ತಿರುವ ಮನೋಭಾವ ಕೂಡ ಅಪಾಯಕಾರಿ. ಕೀಳರಿಮೆಯಿಂದ ಬಳಲುತ್ತಿರುವ ಅವರ ತರ್ಕಹೀನವಾದ 'ಮುಂದುವರಿದ' ಶಿಕ್ಷಣ ಪಡೆದ ಜನರ ಮನೋಭಾವವನ್ನು ಅನುಕರಿಸುತ್ತಾರೆ. ಜ್ಯೋತಿಷ್ಯದಂತಹ ಪ್ರಗತಿ ವಿರೋಧಿ ನಂಬಿಕೆಗಳನ್ನು ಹೊಂದುವುದು ಸಾಮಾಜಿಕ ಅಂತಸ್ತಿನ ಗುರುತಾಗಿದೆ. ವ್ಯಕ್ತಿಯ ಒಳಿತಿಗಾಗಿ ಅಥವಾ ಸಮಾಜದ ಒಳಿತಿಗಾಗಿ ಈ ರೀತಿ ಮನೋಧರ್ಮ ಹೆಚ್ಚಿನ ಹಾನಿಯನ್ನುಂಟುಮಾಡುವ ಅವಿವೇವಕವಾಗಿದೆ. ಈ ರೀತಿ ಹೊಸದಾಗಿ ಪರಿವರ್ತಿತರಾದವರು ಅಲ್ಲಿಯೇ ಶತಮಾನಗಳಿಂದ ಇದ್ದವರಿಗಿಂತ ಹೆಚ್ಚಿನ ಅಭಿಮಾನವನ್ನು ಹೊಂದಿರುತ್ತಾರೆ.

ಜ್ಯೋತಿಷ್ಯದ ಬಗ್ಗೆ ಹಲವಾರು ಜನ ಮಹಾನ್ ವ್ಯಕ್ತಿಗಳು ತಿಳಿಸಿರುವ ಅಭಿಪ್ರಾಯಗಳು ಮಹತ್ವಪೂರ್ಣವಾಗಿವೆ. ಬುದ್ಧರು ತನ್ನ ವಿನಯ ಪೀಟಿಕಾ ಗ್ರಂಥದಲ್ಲಿ ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ ನಡೆಸುತ್ತಾರೊ ಇವರಿಂದ ದೂರವಿರಬೇಕು ಎಂದು ಎಚ್ಚರಿಸುತ್ತಾನೆ.

ನಕ್ಷತ್ರ ವೀಕ್ಷಣೆ ಮತ್ತು ಜ್ಯೋತಿಷ್ಯ, ಶಕುನಗಳ ಆಧಾರದಿಂದ ಶುಭ ಅಥವಾ ಅಶುಭವನ್ನು ತಿಳಿಸುವುದು, ಒಳಿತು, ಕೆಡುಕುಗಳ ಬಗ್ಗೆ ಭವಿಷ್ಯ ನುಡಿಯುವುದು ಇಂತಹವುಗಳನ್ನೆಲ್ಲಾ ತ್ಯಜಿಸಬೇಕು ಎಂಬ ಅಭಿಪ್ರಾಯ ಬುದ್ಧನ ಉಪದೇಶಗಳಲ್ಲಿ ಕಂಡುಬರುತ್ತದೆ. ಮನುಷ್ಯನ ಭವಿಷ್ಯದ ನಿರ್ಣಯಕ್ಕೆ ಅವನೆ ಕಾರಣ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದ ಅವರು ಜ್ಯೋತಿಷ್ಯದ ಬಗ್ಗೆ ಕಟುವಾದ ಅಭಿಪ್ರಾಯ ಪಡುತ್ತಾರೆ. 'ನಕ್ಷತ್ರಗಳ ಪ್ರಭಾವ ನನ್ನ ಮೇಲೆ ಆಗುವುದಾದರೆ ಆಗಲಿ, ಅದು ನನ್ನ ಜೀವನದ ಮೇಲೆ ಪ್ರಭಾವ ಬೀರದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಜ್ಯೋತಿಷ್ಯ ಮತ್ತಿತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು. ಇಂತಹವುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೂಡಲೆ ವೈದ್ಯರನ್ನು ಕಂಡು ಉತ್ತಮ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು' ಎಂಬುದು ವಿವೇಕಾನಂದರ ಅಭಿಪ್ರಾಯ.

ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಯಾವುದೇ ಶಿಕ್ಷಣ ಕ್ರಮದ ಉದ್ದೇಶವಾಗಬೇಕು. ಪ್ರಶ್ನಿಸದೆ, ಪರಿಶೀಲಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಅದು ಭಗವದ್ಗೀತೆ, ಬೈಬಲ್ ಅಥವಾ ಕುರಾನ್ ಆಗಿರಲಿ, ವೈಜ್ಞಾನಿಕವಾದ ಆಲೋಚನೆಗಳಿಗೆ ತೃಪ್ತಿಯನ್ನುಂಟು ಮಾಡಬೇಕು. ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ. ನಮ್ಮ ಶಿಕ್ಷಣ ಪದ್ಧತಿ ಅವಿದ್ಯಾವಂತ ಮೂಢನಂಬಿಕೆಯುಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯುಳ್ಳವನನ್ನಾಗಿ ಪರಿವರ್ತಿಸುತ್ತದೆ. ಇವರಿಬ್ಬರಲ್ಲಿ ಯಾರು ಹೆಚ್ಚು ಅಪಾಯಕಾರಿ ಎಂಬುದು ನಮಗೆಲ್ಲ ಗೊತ್ತು.

ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಕೊಡುತ್ತಿರುವ ಸಂಸ್ಥೆಗಳು ಜ್ಯೋತಿಷ್ಯ, ಹಸ್ತ ಸಾಮುದ್ರಿಕ, ಪವಾಡದಂತಹ ಪ್ರಗತಿವಿರೋಧೀ ಅಂಶಗಳ ವೈಜ್ಞಾನಿಕ ತಪಾಸಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.

ದೊರೆತಿರುವ ಆಧಾರಗಳ ಸಹಾಯದಿಂದ ನಾನು ಜ್ಯೋತಿಷ್ಯವನ್ನು ಕುರಿತು ವಿಶ್ಲೇಷಿಸಿದ್ದೇನೆ. ಇದರಿಂದ ಜ್ಯೋತಿಷ್ಯವು ಸಂಪೂರ್ಣವಾಗಿ ಅವೈಜ್ಞಾನಿಕ ಎಂಬ ತೀರ್ಮಾನಕ್ಕೆ ಬರಬಹುದು. ವಿಜ್ಞಾನದ ವಿದ್ಯಾರ್ಥಿಯಾದ ನಾನು ಹೊಸ ಸಂಗತಿಗಳ ಸಹಾಯದಿಂದ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಸಿದ್ಧನಿದ್ದೇನೆ. ತೆರೆದ ಮನಸ್ಸು ನಮ್ಮದು. ಪ್ಯಾರಚೂಟ್‌ನಂತೆ ತೆರೆದಾಗ ಮಾತ್ರ ಅದು ಕಾರ್ಯನಿರ್ವಹಿಸುವುದು ಎಂದು ನಾನು ಬಲ್ಲೆ. ಆದರೆ ಇಲ್ಲಿ ತೆರೆದ ಮನಸ್ಸು ಎಂದರೆ ಖಾಲಿ ತಲೆ ಅಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ.

ಕಾಮೆಂಟ್‌ಗಳಿಲ್ಲ: