ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಸರಣಿ ೩ - ಡಾ. ನರಸಿಂಹಯ್ಯ - ಧರ್ಮ ಮತ್ತು ವ್ಯೆಚಾರಿಕ ಮನೋಭಾವ

ಶ್ರೀ ಸತ್ಯಸಾಯಿಬಾಬಾ ಅವರು ಹೊಂದಿರುವ ಪವಾಡ ಶಕ್ತಿಗಳನ್ನು ಕುರಿತು ದೇಶದಾದ್ಯಂತ ವಿಪುಲವಾದ ಚರ್ಚೆ ನಡೆಯುತ್ತಿತ್ತು. ಇದು ಆಗ ರಾಷ್ಟ್ರೀಯ ವಿವಾದದ ವಿಷಯವಾಗಿದೆ. ಅನೇಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸಾಕಷ್ಟು ಪುಟಗಳನ್ನು ಈ ವಿಷಯದ ಚರ್ಚೆಗೆ ವಿನಿಯೋಗಿಸಿವೆ. ಹೆಚ್ಚು ಕಮ್ಮಿ ಇದು ಮನೆ ಮಾತಾಗಿತ್ತು.

ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ರಚಿತವಾದ ಪವಾಡಗಳು ಮತ್ತು ಮೂಢನಂಬಿಕೆಗಳು ಕುರಿತು ವೈಜ್ಞಾನಿಕವಾಗಿ ತನಿಖೆ ಮಾಡಲು ರಚಿತವಾದ ಸಮಿತಿಯ ಪ್ರಯತ್ನಗಳು ಈ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮಗೆ ತಿಳಿದಿರುವ ಸಂಗತಿ. ನಮ್ಮ ಸಮಾಜದಲ್ಲಿ ಬಹಳ ಪ್ರಮಾಣದಲ್ಲಿ ಮೂಢನಂಬಿಕೆಗಳು ಇವೆಯಲ್ಲವೆ, ಅವು ಸಮಾಜಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನು ಉಂಟು ಮಾಡಿವೆ. ಮತ್ತೆ ಕೆಲವು ವ್ಯಕ್ತಿಗಳು ತಮಗೆ ಸಾಮಾನ್ಯ ವ್ಯಕ್ತಿಗಳಿಂದ ಆಗದಂತಹ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಈ ಸಮಸ್ಯೆಗಳನ್ನು ವಿಶ್ವವಿದ್ಯಾಲಯವು ಪರಿಶೀಲಿಸುವುದು ಅವಶ್ಯಕ ಮತ್ತು ಉಚಿತ ಎನ್ನಿಸಿತು. ೧೯೭೬ರ ಮಾರ್ಚ್ ತಿಂಗಳಲ್ಲಿ ವಿಶ್ವವಿದ್ಯಾಲಯವು ತನ್ನ ಆಯವ್ಯಯವನ್ನು ರೂಪಿಸುವ ಸಂದರ್ಭದಲ್ಲಿ ಈ ಉದ್ದೇಶಕ್ಕಾಗಿ ಇಪ್ಪತೈದು ಸಾವಿರ ರೂಪಾಯಿಗಳನ್ನು ತೆಗೆದಿಡಲಾಯಿತು. ಏಪ್ರಿಲ್ ಮೊದಲ ವಾರದಲ್ಲಿ ಉಪ ಕುಲಪತಿಯವರ ಅಧ್ಯಕ್ಷತೆಯಲ್ಲಿ, ಬೇರೆ ಬೇರೆ ಕ್ಷೇತ್ರಕ್ಕೆ ಸೇರಿದ ಹನ್ನೊಂದು ಜನರ ಸಮಿತಿಯನ್ನು ರಚಿಸಲಾಯಿತು.

ನಮ್ಮ ತನಿಖೆಯ ಕ್ಷೇತ್ರ ತುಂಬಾ ವಿಶಾಲ ಮತ್ತು ಅಸ್ಪಷ್ಟವಾದ್ದರಿಂದ ಮೊದಲ ಹಂತದಲ್ಲಿ ಉಚಿತವಾದ, ಸ್ಪಷ್ಟವಾದ ಕೆಲವು ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ನಿಶ್ಚಯಕ್ಕೆ ಬಂದೆವು. ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುವ ಅಸಹಜವಾದ ಸಂಗತಿಯ ಬಗ್ಗೆ ಸಹಜವಾಗಿಯೇ ಆಧ್ಯತೆ ಕೊಟ್ಟೆವು. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಾಲ್ಕು-ಐದು ವ್ಯಕ್ತಿಗಳು ನಮಗೆ ಹೊಳೆದರು. ಈ ಸಮತಿಯ ಉದ್ಧೇಶಗಳು ಪ್ರಕಟವಾದ ಕೂಡಲೇ ಶ್ರೀ ಶಿವಬಾಲಯೋಗಿಗಳು ತಮ್ಮ ಬೆಂಗಳೂರಿನ ಆಶ್ರಮಕ್ಕೆ ನನ್ನನ್ನು ಆಹ್ವಾನಿಸಿದರು. ನಾನು ಇಬ್ಬರು ಆಧ್ಯಾಪಕರ ಜೊತೆ ಆಶ್ರಮಕ್ಕೆ ಬೇಟಿ ಕೊಟ್ಟೆ. ಚರ್ಚೆಯ ಸಮಯದಲ್ಲಿ ಶೂನ್ಯದಲ್ಲಿ ಯಾವ ವಸ್ತುವನ್ನೂ ತಾವು ಸೃಷ್ಟಿಸುವುದಿಲ್ಲವೆಂದು ಸ್ವಾಮೀಜಿಯವರು ಸ್ಪಷ್ಟಪಡಿಸಿದರು. ಈ ರೀತಿಯ ಶಕ್ತಿಯನ್ನು ಪಡೆದಿದ್ದಾರೆ ಎಂದು ಹೆಸರು ಮಾಡಿದ್ದ ಕೊಡಗಿನ ಶ್ರೀ ಸ್ವಾಮಿ ಶಂಕರ ಮತ್ತು ಮೈಸೂರಿನ ಸಮೀಪದ ಶ್ರೀ ಸಚ್ಚಿದಾನಂದ ಗಣಪತಿ ಸ್ವಾಮಿ ಅವರು ತಾವು ಯಾವುದೇ ರೀತಿಯ ಪವಾಡಗಳನ್ನು ಮಾಡುವುದಿಲ್ಲವೆಂದು ಬಹಿರಂಗವಾಗಿ ತಿಳಿಸಲು ಪ್ರಾರಂಭಿಸಿದರು. ಇಷ್ಟರಲ್ಲಿಯೇ `ದೇವ ಬಾಲಕ` ಎಂದು ಹೆಸರಾದ ಶ್ರೀ ಬಾಳ ಶಿವಯೋಗಿ ಅವರು ಬೆಂಗಳೂರಿಗೆ ಬಂದಿದ್ದು, ಅವರಿಂದ ನನಗೆ ಆಹ್ವಾನ ಬಂದಿತು. ಚರ್ಚೆಯ ಸಂದರ್ಭದಲ್ಲಿ ನಾನು ಅವರ ಬೆರಳುಗಳ ಚಲನೆಯನ್ನು ಹಾಗೂ ಕಾವಿಯ ನಿಲುವಂಗಿ ಒಳಗೆ ಇದ್ದ ಮುಷ್ಟಿಯನ್ನು ಗಮನಿಸುತ್ತಿದ್ದೆ. ಚರ್ಚೆ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ವಾಮೀಜಿಯವರು ತಮ್ಮ ಕೈಯನ್ನು ತಕ್ಷಣ ಮುಂದೆ ಚಾಚಿ, ಮುಚ್ಚಿದ ಮುಷ್ಟಿಯನ್ನು ವೃತ್ತಾಕಾರವಾಗಿ ತಿರುಗಿಸಿ, ಒಂದು ಚಿಕ್ಕ ವಿಗ್ರಹವನ್ನು, ರುದ್ರಾಕ್ಷಿಯನ್ನು ನನಗೆ ಕೊಟ್ಟರು. ನಾನು ಅಂತಹುದನ್ನು ನಿರೀಕ್ಷಿಸುತ್ತಿದ್ದರಿಂದ, ನನಗೆ ಏನೂ ಆಶ್ಚರ್ಯವಾಗಲಿಲ್ಲ. ಅವರ 'ಪವಾಡ' ನನಗೆ ಸ್ಪಷ್ಟವಾಗಿಯೇ ಅರಿವಾಯಿತು. ಈ ಕಾರ್ಯದಲ್ಲಿ ಅವರು ಇನ್ನೂ ಅನನುಭವಿ. ಈ ' ಕಲೆ' ಯಲ್ಲಿ ಅವರು ಕಲಿಯಬೇಕಾದ್ದು ಇನ್ನೂ ಬಹಳ ಇದೆ. ಆದರೆ ಅವರು ಪ್ರಾಮಾಣಿಕ ವ್ಯಕ್ತಿ. ಯಾವುದೇ ವಸ್ತುವನ್ನು ಸೃಷ್ಟಿಸುವ ಅಥವಾ ಬದಲಾಯಿಸುವ ಶಕ್ತಿ ತಮಗೆ ಇಲ್ಲವೆಂದು ಅವರು ಒಪ್ಪಿಕೊಂಡರು. ಸತ್ಯಸಾಯಿಬಾಬಾರ ಪರಿಶೀಲನೆಯ ನಂತರ ವಾಸ್ತವ ಸಂಗತಿಗಳನ್ನು ತಿಳಿಸುತ್ತೇನೆ ಎಂದು ಅವರು ಅಭಿಪ್ರಾಯಪಟ್ಟರು.

ಸತ್ಯಸಾಯಿಬಾಬಾರನ್ನು ನೋಡುವ ಮುಂಚೆ ಪಾಂಡವಪುರದ ಎಂಟು ವರ್ಷದ ಬಾಲಕ, ಶ್ರೀ ಸಾಯಿಕೃಷ್ಣರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ನಿಶ್ಚಿಯಿಸಿದೆವು. ಶೂನ್ಯದಲ್ಲಿ ವಿಭೂತಿಯನ್ನು ಉಂಟಮಾಡುವುದರಲ್ಲಿ ಅವರು ಬಹಳ ಪ್ರಸಿದ್ಧರಾಗಿದ್ದರು. ಯಾವ ರೀತಿ ಪಾಂಡವಪುರ ಪವಾಡ ಬೆಳಕಿಗೆ ಬಂತು ಎಂಬುದನ್ನು ಇನ್ನೊಮ್ಮೆ ಬರೆಯುತ್ತೇನೆ.

ಈ ತನಿಖೆಯ ಫಲಿತಾಂಶ ವಿಶೇಷ ಪರಿಣಾಮವನ್ನುಂಟುಮಾಡಿತು. ಸಮಿತಿಯ ಅರ್ಹತೆ, ಸಾಮರ್ಥ್ಯಗಳ ಬಗೆಗೆ ಕೆಲವು ಅನುಮಾನಗಳನ್ನು ಹೊಂದಿದ್ದವರು ಸಹ ಈ ಪರಿಶೀಲನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪವಾಡದ ಕಟ್ಟುಕಥೆಗಳನ್ನು ಶೋಧಿಸಿದ್ದಕ್ಕಾಗಿ ಸಮಿತಿಯನ್ನು ಅಭಿನಂದಿಸಿ ನೂರಾರು ಪತಗಳು ಬಂದವು. ಪತ್ರಿಕೆಗಳು ಈ ಮುಖ್ಯ ವಿಷಯಕ್ಕೆ ಹೆಚ್ಚಿನ ಪ್ರಚಾರ ಕೊಟ್ಟವು. ಇಷ್ಟರಲ್ಲಿ ಶೂನ್ಯದಲ್ಲಿ ವಸ್ತುಗಳ ಸೃಷ್ಟಿಯ ಬಗ್ಗೆ ಪರಿಶೀಲಿಸಲು ಅವಕಾಶ ಮಾಡಿಕೊಡುವಂತೆ ಕೋರಿ ಶ್ರೀ ಸತ್ಯಸಾಯಿ ಬಾಬಾ ಅವರಿಗೆ ಮೂರು ಪತ್ರಗಳನ್ನು ಬರೆದಿದ್ದೆ. ಆದರೆ ಅವುಗಳಿಗೆ ಅವರಿಂದ ಯಾವ ಉತ್ತರವೂ ಬರಲಿಲ್ಲ.

ಈ ಮೂರು ಪತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಇದಕ್ಕೆ ಸಂಬಂಧಿಸಿದ ವಿವಾದ ದೇಶದ ಎಲ್ಲೆಡೆ ಪ್ರಚಾರಕ್ಕೆ ಬಂತು. ಇಷ್ಟರಲ್ಲಿಯೇ ಕೆಲವು ಸ್ವಾರಸ್ಯಕರ ಬೆಳವಣಿಗೆ ಕಂಡುಬಂತು. ಶ್ರೀ ಸತ್ಯಸಾಯಿಬಾಬಾರ 'ಮುಖವಾಣಿ' ಗಳು ಪಾಂಡವಪುರದ ರಹಸ್ಯ ಬಯಲಾದ ಕೂಡಲೇ, ಸಾಯಿಕೃಷ್ಣರಿಗೂ, ಸಾಯಿಬಾಬಾರಿಗೂ ಯಾವುದೇ ಸಂಬಂಧವಿಲ್ಲವೆಂದು ಘೋಷಿಸಿದರು. ಪಾಂಡವಪುರದ ಎಲ್ಲ ಚಟುವಟಿಕೆಗಳು ಸಾಯಿಬಾಬಾರ ಹೆಸರಿನಲ್ಲಿಯೇ ನಡೆಯುತ್ತಿತ್ತು ಎಂಬ ಅಂಶವನ್ನು ಓದುಗರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಸಾಯಿಬಾಬಾರ ಸ್ಫೂರ್ತಿಯಿಂದಲೇ ಈ 'ದೇವಬಾಲಕನು' ನು 'ಪವಾಡ' ಗಳನ್ನು ಮಾಡುತ್ತಿದ್ದನೆಂಬುದು ಜನಜನಿತ ಸಂಗತಿ. ಅಲ್ಲಿನ ಭಕ್ತರು ಸಾಯಿಬಾಬಾರನ್ನು 'ಮೈನ್‌ಸ್ವಿಚ್'ಗೂ ಬಾಲಕನನ್ನು 'ಬಲ್ಬಿಗೂ' ಹೋಲಿಸುತ್ತಿದ್ದರು. ಈ 'ದೇವಬಾಲಕ' ನು 'ಪ್ರೌಢದೇವ' ನಾಗಿ ಬೆಳವಣಿಗೆಯನ್ನು ಹೊಂದುವುದಕ್ಕೆ ಸಮಿತಿಯು ತಡೆಯನ್ನುಂಟುಮಾಡಿದ್ದು ಸಂತೋಷದ ಸಂಗತಿ. ಈ ಬಾಲಕನ 'ದೈವತ್ವ' ದ ಬೆಳವಣಿಗೆ ಯಾವ ಅಡಿಯೂ ಉಂಟಾಗದಿದ್ದರೆ ಬಹುಶಃ ಕಾಲಕ್ರಮೇಣ ಈ ಗುಂಪಿಗೆ ಸೇರಿದ 'ಐವತ್ತು ವರ್ಷದ ದೇವರಂತಹ' ವ್ಯಕ್ತಿಗಳನ್ನು ಮೀರಿಸುತ್ತಿದ್ದ ಎಂದು ತೋರುತ್ತದೆ.

ಈ ವಿವಾದ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ವೈಟ್‌ಫೀಲ್ಡ್‌ನ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ ಸಮಾರಂಭವೊಂದು ನಡೆಯಿತು. ಈ ಸಭೆಯ ಕಾರ್ಯಕಲಾಪವನ್ನು ನೋಡಿದಾಗ ಅದರ ಮುಖ್ಯ ಉದ್ಧೇಶ ವಿಶ್ವವಿದ್ಯಾಯಲಯದ ಸಮತಿಯನ್ನು ಆಕ್ಷೇಪಿಸುವುದೇ ಆಗಿತ್ತು ಎಂಬುದು ಸ್ಪಷ್ಟವಾಯಿತು. ಶ್ರೀ ಸತ್ಯಸಾಯಿಬಾಬಾರವರು ತಮ್ಮ ಉಪನ್ಯಾಸದಲ್ಲಿ ವಿಶ್ವವಿದ್ಯಾಲಯದ ಸಮಿತಿಯನ್ನು ಉಗ್ರವಾಗಿ ಖಂಡಿಸಿದರು. ತಮ್ಮ 'ಪವಿತ್ರ ದೇಹ' ದಿಂದ ವಿಷಕಾರಿದರು. ನನ್ನನ್ನು ಮತ್ತು ಸಮಿತಿಯ ಇತರ ಸದಸ್ಯರನ್ನು ನಾಯಿಗಳೆಂದು, ಇರುವೆಗಳೆಂದು ಕರೆದರು. ತಮ್ಮನ್ನು ನಕ್ಷತ್ರಕ್ಕೂ, ಆಗಾಧವಾದ ಸಮುದ್ರಕ್ಕೂ ಹೋಲಿಸಿಕೊಂಡರು. ಜಗತ್ತಿನ ಯಾವುದೇ ಶಕ್ತಿಯು ತಮ್ಮನ್ನು ಪರೀಕ್ಷಿಸಲು ಸಾಧ್ಯವಿಲ್ಲವೆಂದು ಘೋಷಿಸಿದರು.

ಈ ವಿವಾದದ ಪ್ರಾಮುಖ್ಯವನ್ನು ಅರಿತ ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳ ಪ್ರತಿನಿಧಿಗಳು ಪುಟ್ಟಪರ್ತಿಗೆ ಸಂದರ್ಶನವನ್ನು ಕೋರಿ ತೀರ್ಥಯಾತ್ರೆ ಕೈಗೊಂಡರು. ಇದಕ್ಕೆ ಮುಂಚೆ ಪ್ರಮುಖ ವ್ಯಕ್ತಿಗಳು ಅವರ 'ದರ್ಶನ' ಕ್ಕೆ ದಿನಗಟ್ಟಲೆ, ಗಂಟೆಗಟ್ಟಲೆ ಕಾಯಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿತ್ತು. ಪತ್ರಿಕಾ ಪ್ರನಿಧಿಗಳಿಗಾಗಿ ಸಾಯಿಬಾಬಾರವರು ಆತಂಕದಿಂದ, ಕಾತುರದಿಂದ ಕಾಯುವ ಸ್ಥಿತಿ ಬಂತು. ತಮ್ಮ ಸಮರ್ಥನೆಗಾಗಿ ದಿನಪತ್ರಿಕೆಗಳ, ವಾರಪತ್ರಿಕೆಗಳ ಕೆಲವು ವ್ಯಕ್ತಿಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ವ್ಯವಸ್ಥೆ ಮಾಡಿದರು. ಅವರ ಭಕ್ತರ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಲು ಆರಂಭವಾದವು. ಈ ಎಲ್ಲಾ ಲೇಖನಗಳು ಅವರ ದೈವೀಗುಣಗಳನ್ನು ಕೊಂಡಾಡಿದವು. ನೀರನ್ನು ಪೆಟ್ರೋಲನ್ನಾಗಿ ಪರಿವರ್ತಿಸುವುದು, ಗುಣವಾಗದ ರೋಗಗಳನ್ನು ಗುಣಪಡಿಸುವುದು, ಸತ್ತವರನ್ನು ಬದುಕಿಸುವುದು, ವಸ್ತುಗಳನ್ನು ಸೃಷ್ಟಿಸುವುದು, ಈ ರೀತಿಯ ಅನೇಕ ಪವಾಡಗಳ ಬಗ್ಗೆ ವಿಚಿತ್ರ ವಿವರಣೆ ಬಂದಿತು. ಈ ಎಲ್ಲ ಅಂಶಗಳಿಂದ ಶ್ರೀ ಸತ್ಯಸಾಯಿಬಾಬಾ ಅವರು ನಿರ್ಮಲ, ಪರಿಶುದ್ಧ ದೇವರಲ್ಲದೆ ಬೇರೆ ಯಾರೂ ಅಲ್ಲ ಎಂಬ ತೀರ್ಮಾನಕ್ಕೆ ಬಂದರು. ನಿಜವಾಗಿಯೂ ದೇವರಾಗಿದ್ದರೆ ಅವರು ಮಾತನಾಡುವ ತೆಲುಗನ್ನು ಅನುವಾದಿಸಲು ಬೇರೆಯವರ ಅವಶ್ಯಕತೆ ಯಾಕೆ? ಯಾವುದೇ ಬಾಷೆಯನ್ನು ಸುಲಭವಾಗಿ ಮಾತನಾಡಲು ತಮ್ಮ ದೈವೀ ಶಕ್ತಿಯನ್ನು ಅವರು ಉಪಯೋಗಿಸಿಕೊಳ್ಳಬಹುದಿತ್ತು. ದೇವರು ಎಲ್ಲವನ್ನೂ ಬಲ್ಲವನು. ಆದರೆ ಸಾಯಿಬಾಬಾ ಅವರ ವಿಜ್ಞಾನ ಮತ್ತಿತರ ವಿಷಯಗಳ ಜ್ಞಾನ ಒಬ್ಬ ಪ್ರೌಢಶಾಲೆಯ ವಿದ್ಯಾರ್ಥಿಗಿಂತ ಕಮ್ಮಿ ಎಂದು ಖಂಡಿತವಾಗಿ ಹೇಳಬಲ್ಲೆ. ಎಲ್ಲ ವ್ಯಕ್ತಿಗಳಂತೆ ಈ 'ದೇವರು' ಕೂಡ ಅನೇಕ ವಿಷಯಗಳಲ್ಲಿ ಅಸಮರ್ಥ. ಈ ದೇವರು ಬರಗಾಲದ ಪ್ರದೇಶದಲ್ಲಿ ಮಳೆ ಬರಿಸಿದ್ದನ್ನಾಗಲೀ ವಿಪತ್ತುಗಳನ್ನು ನಿವಾರಿಸಿದ್ದನ್ನಾಗಲೀ, ಬತ್ತ, ಗೋದಿಗಳನ್ನು ಸೃಷ್ಟಿಸಿ ಬಡವರಿಗೆ ಹಂಚಿ ಸಹಾಯ ಮಾಡಿದ್ದನ್ನಾಗಲೀ ಯಾವಗಲೂ ನೋಡಲಾಗಿಲ್ಲ. ಯಾರಿಗೆ ಗೊತ್ತು, ಅವರಿಗೂ ಕೂಡ ತಮ್ಮದೇ ಆದ ಕಷ್ಟಗಳಿರಬಹುದು.

ಪಾಂಡವಪುರದ ಪವಾಡ ಕಧೆ ಬೆಳಕಿಗೆ ಬಂದ ನಂತರ ಹಾಗೂ ಶ್ರೀ ಸತ್ಯಸಾಯಿಬಾಬಾ ಅವರಿಗೆ ಎಚ್. ಎನ್. ಬರೆದ ಮೂರು ಪತ್ರಗಳು ಪ್ರಕಟವಾದ ಮೇಲೆ ಸಾಯಿಬಾಬಾ ಭಯಭೀತರಾಗಿದ್ದರು. ಅವರು ಈ ಎರಡು ತಿಂಗಳಲ್ಲಿ ಮಾಡಿರುವ ಉಪನ್ಯಾಸಗಳನ್ನು ವಸ್ತುನಿಷ್ಠವಾಗಿ ನೋಡಿದರೆ ಅವರ ಗೊಂದಲ ಮನಸ್ಥಿತಿ ಕಂಡುಬರುತ್ತದೆ. ತಮ್ಮ ಸಮರ್ಥನೆಗೆ ಎಲ್ಲ ರೀತಿಯ ಪ್ರಚಾರವನ್ನು ವಿವಿಧ ರೀತಿಯಲ್ಲಿ ಕೈಗೊಂಡಿದ್ದಾರೆ. ಇವನ್ನೆಲ್ಲಾ ನೋಡಿದರೆ ಅವರು ತಮ್ಮ ಆಸ್ತಿತ್ವಕ್ಕಾಗಿಯೇ ಹೋರಾಟ ನಡೆಸುತ್ತಿರುವಂತೆ ಕಂಡು ಬರುತ್ತಿತ್ತು.

ಶೂನ್ಯದಲ್ಲಿ ವಸ್ತುಗಳ ಸೃಷ್ಟಿ ಸಾಧ್ಯವೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ಈ ರೀತಿಯ ಸೃಷ್ಟಿ ಮನುಷ್ಯನಿಗೆ ಮೀರಿದ್ದು ಆಗಿದ್ದು, ಎಲ್ಲ ವಿಜ್ಞಾನದ ನಿಯಮಗಳನ್ನು ಇದು ತಿರಸ್ಕರಿಸುತ್ತದೆ. ಈ ಅಸಾಮಾನ್ಯವಾದ ಪವಾಡದ ಮುಂದೆ ಇಂದಿನವರೆಗಿನ ಎಲ್ಲ ವಿಜ್ಞಾನದ ಶೋಧನೆಗಳು, ಸಾಧನೆಗಳು ಅಲ್ಪ ಪ್ರಮಾಣದಾಗುತ್ತದೆ. ಅದ್ದರಿಂದ ಪ್ರಾಯೋಗಿಕ ನೆಲೆಯಲ್ಲಿ ಇದು ಸಾಧ್ಯವೇ ಅಥವಾ ಅಲ್ಲವೇ ಎಂಬುದನ್ನು ನೋಡುವುದು ಮಾತ್ರ ನಮ್ಮ ಉದ್ಧೇಶ. ಶೂನ್ಯದಲ್ಲಿ ವಸ್ತುಗಳ ಸೃಷ್ಟಿ ಸಾಧ್ಯವಾದರೆ ಅದು ವಿಜ್ಞಾನದ ಪರಿಧಿಯಲ್ಲಿ ಕಂಡುಬರುವ ಪ್ರಯೋಗವೇ ಹೌದು. ಈ ಕಾರ್ಯದ ಬಗ್ಗೆ ನಾವು ವಿವರಣೆಯನ್ನು ಬಯಸುತ್ತಿಲ್ಲ. ಈ ಕಾರ್ಯ ನಿಜವಾದ ಪಕ್ಷದಲ್ಲಿ ಆ ವಿವರಣೆ ವಿಜ್ಞಾನದ ಕಕ್ಷೆಗೆ ಮೀರಿದ್ದು. ಪ್ರಯೋಗದ ಮೂಲಕ ಈ ಅಂಶವನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ಉದ್ಧೇಶ. ಈ 'ಅನುಭವ' ಕ್ರಿಯೆಯ ರೀತಿಯನ್ನಾಗಲಿ, ವಿವರಣೆಯನ್ನಾಗಲೀ ನನ್ನಂತಹ ಐಹಿಕ ವ್ಯಕ್ತಿಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಇರಬಹುದು. ಇದು ಇಲ್ಲಿ ಮುಖ್ಯವಲ್ಲ. ಆದರೆ ಅವರು ತಮ್ಮ ಪ್ರಯೋಗವನ್ನು ಬಹಿರಂಗವಾಗಿ ಪ್ರಯೋಗಿಸುವುದು ಅವಶ್ಯಕ. ಅವರು ಸಂಬಂಧವಿಲ್ಲದ ವಾದಗಳನ್ನಾಗಲೀ, ಶಬ್ಧಗಳ ಸಂತೆಯನ್ನಾಗಲೀ ಪ್ರದರ್ಶಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಅಸಂಬದ್ಧ ತರ್ಕಗಳು ಸಮಸ್ಯೆಯನ್ನು ಗೊಂದಲಕ್ಕೆ ತಳ್ಳುತ್ತಿವೆಯಷ್ಟೆ. ಆದ್ದರಿಂದ ಅವರ ಶಿಷ್ಯರ ಪುಸ್ತಕಗಳಿಂದ ಅಧ್ಯಾಯ, ಅಧ್ಯಯಗಳನ್ನಲಾಗಲೀ, ಪಂಕ್ತಿಗಳನ್ನಾಗಲಿ ಉದ್ಧರಿಸುವುದು ಅನವಶ್ಯಕ. ತಮ್ಮ ಸ್ವಂತ ಅನುಭವಗಳನ್ನು ತಿಳಿಸುವುದರ ಮೂಲಕ ಸಮಸ್ಯೆಗೆ ಬಣ್ಣ ಕೊಡುವುದು ಬೇಡ. ಶ್ರೀ ಸತ್ಯಸಾಯಿಬಾಬಾ ಅವರು ನಮ್ಮ ಪ್ರಯೋಗಗಳಿಗೆ ಸಹಕರಿಸಿದರೆ ಸಾಕು. ಬೇರೆಯವರ ಪುರಾವೆಗಳಾಗಲೀ, ಸಮರ್ಥನೆಗಳಾಗಲೀ ಅನವಶ್ಯಕ.

ಈ ಪವಾಡದ ಬಗ್ಗೆ ನನ್ನಂತಹವರಿಗೆ ಅನೇಕ ಅನುಮಾನಗಳು ಕಾಡುತ್ತಿವೆ. ಮೊದಲನೆಯದಾಗಿ ಅವರು 'ಸೃಷ್ಟಿಸುವ' ಯಾವುದೇ ವಸ್ತುಗಳು ಅವರ ಮುಷ್ಟಿಗಾತ್ರಕ್ಕಿಂತ ಕಡಿಮೆ ಇರಲು ಕಾರಣವೇನು? ಎರಡನೆಯದಾಗಿ ಅವರು ಸೃಷ್ಟಿಸುವ ಕೈಗಡಿಯಾರ, ಉಂಗುರ ಅಥವಾ ಮತ್ತಾವುದೇ ವಸ್ತುವು ಮೊದಲು ಪ್ರಪಂಚದಲ್ಲಿ ಇರುವಂತಹುದೇ ಯಾಕೆ ಆಗಿರುತ್ತದೆ? ಇಲ್ಲಿ ಕಂಡು ಬರುವ ವಸ್ತುಗಳನ್ನೇ ಅವರು ಪ್ರದರ್ಶಿಸುತ್ತಾರೆ. ಆದ್ದರಿಂದ ಅವರು ದೊಡ್ಡ ಗಾತ್ರದ ಕುಂಬಳಕಾಯಿಯನ್ನಾಗಲೀ ಅಥವಾ ಮೂರು ಅಡಿಯ ಲೋಹದ ಮೂರ್ತಿಯನ್ನಾಗಲೀ ಯಾಕೆ ಸೃಷ್ಟಿಸಬಾರದೆಂದು ಎಚ್.ಎನ್ರವರ ಕೋರಿಕೆ. ಅವರು ತಮಗೆ ಇಷ್ಟ ಬಂದ ವಸ್ತುಗಳನ್ನು ಸೃ,ಷ್ಟಿಸದೆ, ನಾವು ಕೇಳಿದ ವಸ್ತುಗಳನ್ನು ಸೃಷ್ಟಿಸಬೇಕೆಂದು ಬಯಸುತ್ತೇನೆ. ಅನೇಕ ಸೂಕ್ಷ್ಮ ಭಾಗಗಳನ್ನು ಒಳಗೊಂಡಿರುವ ಗಡಿಯಾರವನ್ನು ಅವರು ಸೃಷ್ಟಿಸಲು ಸಾಧ್ಯವಿರಬೇಕಾದರೆ, ಅದಕ್ಕಿಂತ ಸರಳವಾದ ಕುಂಬಳಕಾಯಿ ಅಥವಾ ದೊಡ್ಡ ಲೋಹದ ಮೂರ್ತಿಯನ್ನು ಸೃಷ್ಟಿಸುವುದು ಅವರಿಗೆ ಸುಲಭವಾಗಬೇಕು. ತನ್ನದೇ ಆದ ಮೊಹರು ಇರುವ ವಸ್ತುಗಳನ್ನು ಸೃಷ್ಚಿಸುವುದರಿಂದ ಅದು ಮೂಲ ವಸ್ತುಗಳ ಸೃಷ್ಟಿಯಾಗಲಾರದು. ಈ ಉದ್ಧೇಶಕ್ಕಾಗಿ ಅವುಗಳನ್ನು ಮೊದಲೇ ಸುಲಭವಾಗಿ ತಯಾರಿಸಬಹುದು. ಇದರ ಜೊತೆಗೆ ಈ ಬಗೆಯ 'ಸೃಷ್ಟಿ'ಯು ಕೆಲವಾರು ನೈತಿಕ ಹಾಗೂ ಕಾನೂನಿ ಸಮಸ್ಯೆಗಳಿಗೆ ಒಳಪಡುತ್ತದೆ. ಹೆಚ್. ಎಂ. ಟಿ ವಾಚಿನ 'ಸೃಷ್ಟಿ' ನಿಜವಾದರೆ ಕಂಪೆನಿಯ ಪೇಟೆಂಟಿನ ಕಳುವಿನ ಪ್ರಶ್ನೆ ಬರುತ್ತದೆ. ಬೇರೆ ದೇಶಗಳಿಂದ ಅಮದಾದ 'ವಾಚ್‌ಗಳ ಸೃಷ್ಟಿ' ಕಂಡುಬಂದರೆ ಸುಂಕ ತಪ್ಪಿಸಿಕೊಂಡ ಅಪಾದನೆಯ ಜೊತೆಗೆ ಕಳ್ಳಸಾಗಾಣಿಕೆಯ ಅಪರಾಧಕ್ಕೆ ಅವಕಾಶವಾಗುತ್ತದೆ. ಚಿನ್ನದ ವಸ್ತುಗಳ 'ಸೃಷ್ಟಿಸಿ' ಅದನ್ನು ಘೋಷಿಸದಿದ್ದರೆ ಚಿನ್ನ ನಿಯಂತ್ರಣ ಕಾನೂನನ್ನು ಮೀರಿದಂತೆ ಆಗುತ್ತದೆ. ಸಾಯಿಬಾಬರವರ 'ಸೃಷ್ಟಿ' ನಿಜವಾದರೆ ಮೇಲಿನ ಮುಖ್ಯ ಅಪರಾಧಗಳಿಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಸತ್ಯಸಾಯಿಬಾಬಾ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಕಾರ್ಯಕ್ರಮಗಳುನ್ನು ವಿಶ್ಲೇಷಿಸಿದೆವಾದರೆ ಎಲ್ಲ ಮನುಷ್ಯರಂತೆ ದೇಹರಚನೆ, ದೈನಿಕ ಅಭ್ಯಾಸಗಳು, ಕಂಡುಬರುತ್ತವೆ. ಅವರಿಗೂ ಕೆಲವು ವಿಷಯಗಳಲ್ಲಿ ಆಸಕ್ತಿ, ಅನಾಸಕ್ತಿಗಳು, ಸಾಮರ್ಥ-ಅಸಾಮರ್ಥ್ಯ, ವ್ಯವಹಾರಗಳಲ್ಲಿ ಕಂಡುಬರುವ ಸೋಲು-ಗೆಲುವುಗಳು, ಕೋಪಕ್ಕೆ ಒಳಗಾಗಿ ಆಗಾಗ್ಗೆ ನಿಂದನೆಯ ಮಾತುಗಳನ್ನು ಉಪಯೋಗಿಸವುದು, ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವುದು, ನಿರಾಶೆ-ಆತಂಕಗಳಿಗೆ ಒಳಗಾಗುವುದು, ಜ್ಞಾನದ ಪರಿಮಿತಿ ಈ ಎಲ್ಲ ಅಂಶಗಳು ಅವರು ಎಲ್ಲರಂತೆ ಮನುಷ್ಯರು ಎಂಬುಂದನ್ನು ತಿಳಿಸುತ್ತದೆ. ಕೆಲವು ಅಂಶಗಳಲ್ಲಿ ಎಲ್ಲೋ ಸ್ವಲ್ಪ ವ್ಯತ್ಯಾಸವಿರಬಹುದು. ಸಾರ್ವಜನಿಕವಾಗಿ ಗಮನಿಸಬಹುದಾದ ಅವರ ಸ್ವಭಾವಗಳಲ್ಲಿ, ದೇವರ ಯಾವುದೇ ಹೆಜ್ಜೆ ಗುರುತಾಗಲೀ, ಪರಿಪೂರ್ಣತ್ವದ ಸೂಚನೆಯಾಗಲೀ ಕಂಡುಬರುವುದಿಲ್ಲ. ಯಾವುದೇ ವ್ಯಕ್ತಿಯು ದೈವೀ ಗುಣವನ್ನು ಅಥವಾ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರೆ ಅವನ ಯಾವುದೇ ಚಿಕ್ಕ ಕಾರ್ಯದಲ್ಲಿಯೂ ಅದು ಗೋಚರವಾಗಬೇಕು. ದೈವಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವುದು ಜೀವನ ಮಾರ್ಗ ಆಗಬೇಕು.

ಈ ವಿಷಯದಲ್ಲಿ ನನಗೆ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯವರಂತಹ ಮಹಾನ್ ಆಧ್ಯಾತ್ಮವಾದಿಗಳ ನೆನಪು ಬರುತ್ತದೆ. ಅವರ ಜೀವನಗಳು ತೆರೆದಿಟ್ಟ ಪುಸ್ತಕಗಳು, ಅವರ ನೆಲೆ 'ತೆರೆದ ಮನಗಳು'. ಸ್ವಾಮಿ ವಿವೇಕಾನಂದರ ಕೊಠಡಿಗೆ ಯಾರೇ ಹೋಗಬಹುದಿತ್ತು, ಗಾಂಧೀಜಿಯವರ ಶಿಬಿರವು ಗಾಜಿನಂತೆ ಪಾರದರ್ಶಕವಾಗಿದ್ದು, ಸಾರ್ವಜನಿಕ ಪ್ರದೇಶದಂತೆ ಇತ್ತು. ಭಗವಾನ್ ಬುದ್ಧನ ವಾಸಸ್ಥಳಕ್ಕೆ ಆಕಾಶವೇ ಚಾವಣಿಯಾಗಿತ್ತು. ಅವರುಗಳ ಸರಳವಾದ, ಕಟ್ಟುನಿಟ್ಟಾದ ಬದುಕನ್ನು ಪಾಲಿಸಿದರು. ಯಾರೇ ಯಾವ ಪ್ರಶ್ನೆಯನ್ನೂ ಕೇಳಿದರೂ ಅವರು ಉತ್ತರಿಸಿದರು. ತಮ್ಮನ್ನು ಅಂಧವಾಗಿ ಅನುಕರಿಸಬೇಡಿರೆಂದು ಅವರುಗಳು ಎಲ್ಲರನ್ನೂ ಕೇಳಿಕೊಂಡರು. ಅವರ ಎಲ್ಲ ಹೇಳಿಕೆಗಳೂ ವೈಜ್ಞಾನಿಕ ದೃಷ್ಟಿಕೋಣವನ್ನು ಹೊಂದಿದ್ದವು. ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯನ್ನು 'ಸತ್ಯದ ಶೋಧನೆ' ಎಂದೇ ಕರೆದಿದ್ದಾರೆ. ತಿರುವಣ್ಣಾ ಮಲೈನ ರಮಣ ಮಹರ್ಷಿಗಳು ಕೂಡ ಶ್ರೇಷ್ಠ ವ್ಯಕ್ತಿಯಾಗಿದ್ದು, ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತಿಮ ಸತ್ಯವನ್ನು ಕಂಡುಕೊಳ್ಳುವಲ್ಲಿ ಅವರೆಲ್ಲಾ ವಿನಯ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸಿದರು.

ಸತ್ಯಸಾಯಿಬಾಬಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದು ಅವರ ಕರ್ತವ್ಯ. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳ ಬೇಕಾದ ಅವರು ತಮಗೆ ಇದೆಯೆಂದು ಹೇಳಿಕೊಳ್ಳುವ ಆಧ್ಯಾತ್ಮಿಕ ಶಕ್ತಿಗಳನ್ನು ಬಹಿರಂಗವಾಗಿ ತೋರ್ಪಡಿಸುವುದು ಅವಶ್ಯಕ. ಅವರ ಬಗ್ಗೆ ಪೂರ್ವಗ್ರಹಪೀಡಿತ ಅಥವಾ ಪೂರ್ವಗ್ರಹವಿಲ್ಲದೆ ಅನುಮಾನಪಡುತ್ತಿರುವ ಸಂಶಯ ಪರಿಹಾರವಾಗುತ್ತದೆ. ಇದು ಸಾರ್ವಜನಿಕರ ದೃಷ್ಟಿಯಿಂದ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ತಮ್ಮಲ್ಲಿ ನಂಬಿಕೆ ಇರುವವರಿಗಿಂತ ಹೆಚ್ಚಾಗಿ ಇಲ್ಲದೇ ಇರುವವರ ಕಡೆ ಹೆಚ್ಚು ಗಮನ ಹರಿಸಬೇಕಾದ್ದು ಅವರ ಕರ್ತವ್ಯ. ಪ್ರೀತಿ, ನಂಬಿಕೆ ಮತ್ತು ಪೂರ್ವಗ್ರಹಗಳಿಲ್ಲದೆ ತಮ್ಮೆಡೆಗೆ ಬರುವವರಿಗೆ ದರ್ಶನ ಕೊಡುತ್ತೇವೆ ಎಂದು ಅವರು ಹೇಳಿಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ. ಹಿಂದೆ ಹಾಗೂ ಇತ್ತೀಚಿನ ಕೆಲವು ವಾರಗಳಲ್ಲಿ ಅವರನ್ನು ಕಂಡ ವ್ಯಕ್ತಿಗಳೆಲ್ಲ ಮೇಲಿನ ನಿಯಮಗಳಿಗೆ ಬದ್ಧರಾಗಿದ್ದವರೇ ಎಂದು ನಾನು ಕೇಳಬಯಸುತ್ತೇನೆ. ಅವರ ಭಕ್ತವೃಂದವನ್ನು ಮೇಲುನೋಟಕ್ಕೆ ಗಮನಿಸಿದರೂ ಅವರಲ್ಲಿ ಅನೀತಿವಂತರು, ಭಷ್ಟಾಚಾರಿಗಳು, ವರಮಾನ ತೆರಿಗೆ ತಪ್ಪಿಸಿಕೊಂಡವರೂ, ಸಮಾಜ ದ್ರೋಹಿಗಳು ಬೇಕಾದಷ್ಟು ಜನ ಸಿಗುತ್ತಾರೆ. ವಿಶ್ವವಿದ್ಯಾಲಯ ತನಿಖಾ ಸಮಿತಿಯವರು ಅವರ ಸಂದರ್ಶನಕ್ಕೆ ಅನರ್ಹರೆಂದು ತೋರುತ್ತದೆ. ಸಾಯಿಬಾಬಾ ಅವರ ದೃಷ್ಟಿಯಲ್ಲಿ ನಾವು ಅವರ ಸಹವಾಸಕ್ಕೆ ಯೋಗ್ಯರಲ್ಲಿ. ಅದು ನಿಜವಿದ್ದರೂ ಇರಬಹುದು.

'ನೀವು ದೇವರೇ' ಎಂಬ ಪ್ರಶ್ನೆಗೆ ಅವರು ' ದೇವರು ಎಲ್ಲರಲ್ಲಿಯೂ ಇದ್ದಾನೆ' ಎಂಬ ಉತ್ತರ ಕೊಟ್ಟರೆಂದು ಪತ್ರಿಕೆಗಳಲ್ಲಿ ವರದಿ ಆಗಿದೆ. ಇಪ್ಪತೈದು ವರ್ಷಗಳಿಂದ ಆಗ್ ಆಧ್ಯಾಪಕರಾಗಿದ್ದ ಎಚ್.ಎನ್. ಈ ಉತ್ತರ ಅಪ್ರಸ್ತತ ಎಂದು ವಿನಯಪೂರ್ವಕವಾಗಿ ತಿಳಿಸ ಬಯಸುತ್ತೇನೆ. ಇದು ಪ್ರಶ್ನೆಯನ್ನು ಮರೆಸುವ ಪ್ರಯತ್ನ. ತಮ್ಮನ್ನು ಆಕ್ಷೇಪಿಸುವವರು ತಾವು ಮಾಡಿರುವ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮರೆಯುತ್ತಾರೆ ಎಂದು ಶ್ರೀ ಸತ್ಯಸಾಯಿಬಾಬಾರವರು ನೊಂದ ದ್ವನಿಯಲ್ಲಿ ಹೇಳುವುದುಂಟು. ನಾವು ಆ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ.

ನಾವು ತೆಗೆದುಕೊಂಡಿರುವ ಸಮಸ್ಯೆಯ ಅಂತರಾಳವು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದ್ದು, ಅನೇಕ ಮಹತ್ತರವಾದ ಪರಿಣಾಮಗಳಿಗೆ ಕಾರಣವಾಗಬಲ್ಲದು. ಈ ತನಿಖೆಯು ಯಾವುದೇ ವ್ಯಕ್ತಿಯನ್ನು ಮುಖಭಂಗ ಮಾಡುವ ಉದ್ಧೇಶದಿಂದ ಹೊರಟಿಲ್ಲ. ಆದರೆ ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿಯ ಮನೋಭಾವನ್ನು ಪ್ರಶ್ನಿಸುತ್ತದೆ. ಇದರ ಗುರಿ ' ಸತ್ಯಾನ್ವೇಷಣೆ' ಯಾಗಿದೆ. ನಮ್ಮ ದೇಶವು ಸಾವಿರಾರು ದೇವರುಗಳು, ಬಾಬಾಗಳು ಮತ್ತು ' ಮಿನಿ' ಬಾಬಾಗಳ ಸಂತೆಯಾಗಿದೆ. ಪರಿಶೀಲನ ಮಾರ್ಗದಿಂದ, ಪ್ರಶ್ನಿಸುವ ರೀತಿಯಿಂದ ಅಸಲು ನಕಲುಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. ಈಗ ಪ್ರತಚಲಿತವಾಗಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗಗಳನ್ನು ಪರಿಶುದ್ಧಗೊಳಿಸುವುದು ಅತ್ಯವಶ್ಯಕ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಅನೇಕ ಶತಮಾನಗಳಿಂದ ಈ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಶೋಷಣೆ ನಡೆದಿದೆ. ಬಡವರು ಹಾಗೂ ದಡ್ಡರೂ ನಿರಂತರವಾಗಿ ಮೋಸಕ್ಕೆ ಒಳಪಟ್ಟಿದ್ದಾರೆ. ಈ ಜ್ಞಾನ ಯುಗದಲ್ಲೂ ಕೆಲವು ವಿಜ್ಞಾನಿಗಳು ಇದಕ್ಕೆ ಅಪವಾದವಾಗಿಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ ಎಂಬುದು ನಿಜ. ವಿಜ್ಞಾನಿಯು ಪ್ರಯೋಗಶಾಲೆಯಲ್ಲಿ ಜೀವವನ್ನು ಸೃಷ್ಟಿಸುವ ಹಂತದಲ್ಲಿ ಇದ್ದಾನೆ. ಪ್ರಕೃತಿಯ ಅನೇಕ ರಹಸ್ಯಗಳನ್ನು ಮನುಷ್ಯನು ತನ್ನ ಪರಿಶೀಲನ ಮನೋಭಾವದಿಂದ, ಅವಿರತ ಶ್ರಮದಿಂದ ಬಿಡಿಸಿದ್ದಾನೆ. ನೆನ್ನೆಯ ದಿನ ಅತಿಮಾನುಷ ಎಂದು ಅಂದುಕೊಂಡ ಸಂಗತಿಯು ಈ ದಿನ ಸಂಪೂರ್ಣ ಸಹಜ ಸಂಗತಿಯಾಗಿದೆ. ಇದು ಸಾಧನೆಯ ಒಂದು ಮುಖ ಮಾತ್ರ.

ಈ ಪ್ರಗತಿಯ ಮತ್ತೊಂದು ಭಾಗದ ಚಿತ್ರ ಅತ್ಯಂತ ನಿರಾಶದಾಯಕ. ವಿಜ್ಞಾನಿ ಅಥವಾ ವಿಜ್ಞಾನದ ವಿದ್ಯಾರ್ಥಿ ಪ್ರಯೋಗ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುವಾಗ ವಿಚಾರವಾದಿಯಾಗಿ ಕಂಡುಬರುತ್ತಾನೆ. ಆದರೆ ಇದೇ ವ್ಯಕ್ತಿ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಾಗ ಸಂಪೂರ್ಣವಾಗಿ ವೈಚಾರಿಕತೆಯನ್ನು ತ್ಯಜಿಸಿ ಬಿಡುತ್ತಾನೆ. ಅವನ ಯೋಚನಾಶಕ್ತಿ ರಜೆ ತೆಗೆದುಕೊಂಡು ಬಿಡುತ್ತದೆ. ಕೆಲವು ವಿಜ್ಞಾನಿಗಳು ಪವಾಡಗಳನ್ನು ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳನ್ನು ಅಂಧರಾಗಿ ಅನುಸರಿಸುವುದೂ ಉಂಟು. ವಿಜ್ಞಾನವು ಜೀವನ ನಂಬಿಕೆಯಾಗದೆ ಹೊಟ್ಟೆಪಾಡಿನ ಮಾರ್ಗವಾದಲ್ಲಿ, ಅಂತಹ ವ್ಯಕ್ತಿಗಳು ಹೇಗೆ ತಾನೇ ವೈಜ್ಞಾನಿಕ ಮನೋಭಾವವನ್ನು ವೈಚಾರಿಕತೆಯನ್ನು ಪ್ರಚಾರ ಮಾಡಲು ಸಾಧ್ಯ.

ನಮ್ಮ ದೇಶವು ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿದೆ. ಶಿಕ್ಷಣ ಪಡೆಯುತ್ತಿರುವವರಿಗೆ ಸರಿಯಾದ ಶಿಕ್ಷಣ ದೊರೆಯಬೇಕಾಗಿರುವುದು ಈಗ ಅತ್ಯಂತ ಅವಶ್ಯಕ. ಮೂಢನಂಬಿಕೆಯು ಭಯ ಮತ್ತು ಅಜ್ಞಾನಗಳಿಂದ ಉಂಟಾಗುತ್ತದೆ. ಅವು ಆತ್ಮವಿಶ್ವಾಸವನ್ನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ನಾಶಪಡಿಸುತ್ತವೆ. ಅವು ಸ್ವತಂತ್ರ ಚಿಂತನೆಯನ್ನು, ನಿರ್ಭೀತ ಮನೋಭಾವವನ್ನು ಮೊಟಕುಗೊಳಿಸುತ್ತವೆ.

ವಿಜ್ಞಾನದ ಫಲಿತಾಂಶಗಳು ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಆದರೆ ವಿಜ್ಞಾನದ ಚೈತನ್ಯವು (spirit) ಜನಪ್ರಿಯವಾಗಿಲ್ಲ. ವಿಜ್ಞಾನದ ನಿಜವಾದ ಪ್ರಾಮುಖ್ಯ ಈ ಅಂಶದಲ್ಲಿ ಅಡಗಿದೆ ಎಂಬುದು ನನ್ನ ಅಭಿಪ್ರಾಯ.

ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು. ಈ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಎಲ್ಲ ಸಂಸ್ಥೆಗಳು ಮತ್ತು ವಿಶ್ವವಿಧ್ಯಾಲಯಗಳು ಕಾರ್ಯಪ್ರವೃತ್ತರಾಗಬೇಕು. ಪಂಡಿತ ಜವಹರಲಾಲ್ ನೆಹುರೂರವರು ಅಲಹಾಬಾದಿನ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉದ್ಧೇಶಗಳನ್ನು ಕುರಿತು ಹೇಳಿದ ಮಾತುಗಳನ್ನು ಬಹುಪಾಲು ವಿಶ್ವವಿದ್ಯಾಲಯಗಳು ಮರೆತು ಬಿಟ್ಟಿವೆ. ವಿಶ್ವವಿದ್ಯಾಲಯವು ಮಾನವತಾವಾದ, ಸಹನೆ, ವೈಚಾರಿಕತೆ, ನಿರ್ದಿಷ್ಟ ಗುರಿಗಾಗಿ ಹೋರಾಡುವ ಸಾಹಸ ಮತ್ತು ಸತ್ಯದ ಅನ್ವೇಷಣೆಯ ಸಂಕೇತ. ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆ, ಎಂದು ನೆಹರೂರವರು ಅಭಿಪ್ರಾಯ ಪಟ್ಟಿದ್ದಾರೆ.

ನಮಗೆಲ್ಲ ತಿಳಿದಿರುವಂತೆ ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಸಮಿತಿಯು ಪ್ರತಿಯೊಬ್ಬ ಪ್ರಜೆಯ ಮೂಲಭೂತವಾದ ಹತ್ತು ಕರ್ತವ್ಯಗಳನ್ನು ಸೂಚಿಸಿದೆ. ಅವುಗಳಲ್ಲಿ ಎಂಟನೆಯ ಕರ್ತವ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು. ಮಾನವತಾವಾದ, ವೈಚಾರಿಕತೆ, ಪರೀಕ್ಷಾ ಮನೋಭಾವ ಹಾಗೂ ಸುಧಾರಕ ದೃಷ್ಟಿಯನ್ನು ತಿಳಿಸುತ್ತದೆ. ಈ ಕರ್ತವ್ಯವನ್ನು ಪ್ರತಿಯೊಬ್ಬನೂ ಗಂಭೀರವಾಗಿ ತೆಗೆದುಕೊಡು ಕಾರ್ಯರೂಪಕ್ಕೆ ತಂದರೆ ಬಹಳ ಒಳ್ಳೆಂi ಪರಿಣಾಮಗಳಾಗುತ್ತವೆ. ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ರೀತಿಯ ತನಿಖೆಗಳನ್ನು ಕೈಗೊಳ್ಳುವುದಕ್ಕೆ ಸಂವಿಧಾನದ ಒಪ್ಪಿಗೆ ಕೂಡ ದೊರೆತಿದೆ ಎಂಬುದು ಈ ಅಂಶದಿಂದ ತಿಳಿದು ಬರುತ್ತದೆ.

ಈಗ ಸತ್ಯಸಾಯಿಬಾಬಾ ಮತ್ತು ಅವರ ಬೆಂಬಲಿಗರು ಉನ್ಮಾದದ ಆವೇಶದ ಮಾತುಗಳ ಕಡೆ ಗಮನ ಹರಿಸೋಣ. ಬಹಳಷ್ಟು ಲೇಖನಗಳನ್ನು ಪ್ರಕಟಿಸುವುದರಿಂದ, ಸಂಶಯದ ಆವರಣದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶಿಸುವುದರಿಂದ, ಬೀದಿಯಲ್ಲಿ ನಿಂತು ಕೂಗುವುದರಿಂದ ಆ ಸತ್ಯಸಾಯಿಬಾಬಾರವರು ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುತ್ತಾರೆ ಎಂಬುದು, ನಿಜವಾಗುವುದಿಲ್ಲ. ಇವೆಲ್ಲವೂ ಅವರ ದೈವೀಶಕ್ತಿಯನ್ನು ರುಜುವಾತು ಮಾಡುವುದಿಲ್ಲ. ಎಲ್ಲಿಯ ತನಕ ಈ ಸಂದಿಗ್ಧತೆ ಮುಂದುವರೆಯಬೇಕು? ಸಾವಿರಾರು ಜನರಿಗೆ ಇದರ ಬಗ್ಗೆ ನಿಜವಾದ ಸಂಶಯಗಳಿವೆ. ಇಷ್ಟು ಸಮಯವಾದರೂ ಈ ಒಗಟು ಪರಿಹಾರವಾಗದೇ ಇರುವುದು ಸರಿಯಲ್ಲ. ದೇಶದ ತುಂಬ ನಡೆಯುತ್ತಿರುವ ಚರ್ಚೆಯು ವ್ಯರ್ಥವಾಗುವುದು ಉಚಿತವಲ್ಲ. ಈ ಹೆಚ್ಚಿನ ವಿವಾದಿಂದ ಏನಾದರೂ ಗಟ್ಟಿಯಾದ ತೀರ್ಮಾನಕ್ಕೆ ಬರುವುದು ಅವಶ್ಯಕ. ಈ ಸಮಸ್ಯೆಯು ಸರಳ ಮತ್ತು ಸ್ಪಷ್ಟ. ಸಂಬಂಧವಿಲ್ಲದ ಸಂಗತಿಗಳನ್ನು ಇದರ ಜೊತೆಯಲ್ಲಿ ತಂದು ಗೊಂದಲ ಮಾಡುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ನುಣಿಚಿಕೊಳ್ಳವ ಪ್ರಯತ್ನವಾಗಲೀ, ಹಾರಿಕೆಯ ಉತ್ತರವಾಗಲೀ, ವ್ಯರ್ಥಮಾತುಗಳಾಗಲೀ ಅವಶ್ಯಕತೆ ಇಲ್ಲ. ಶ್ರೀ ಸತ್ಯಸಾಯಿಬಾಬಾರವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಮ್ಮ ಸಮಿತಿಯು ಅವರನ್ನು ನೋಡುವ ಅವಕಾಶವನ್ನು ಕೊಟ್ಟು ನೈತಿಕ ಧೈರ್ಯವನ್ನು ವ್ಯಕ್ತಪಡಿಸಲಿ. ಅವರೊಡನೆ ಚರ್ಚಿಸಲು ಹಾಗೂ ಬಹಿರಂಗವಾಗಿ ಅವರ ಪವಾಡವನ್ನು ಪರೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟು ಅವರು ತಮ್ಮ ಮಾತಿನ ಸತ್ಯವನ್ನು ಸಾಬೀತುಪಡಿಸಲಿ.

ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಎಚ್. ಎನ್. ವಿಷಯವನ್ನು ಗ್ರಹಿಸುವಲ್ಲಿ ತೆರೆದ ಮನಸ್ಸನ್ನು ಹೊಂದಿದ್ದರು. ಹೊಸ ಅಂಶಗಳಿಂದ, ಅನುಭವಗಳಿಂದ ನನ್ನ ಅಭಿಪ್ರಾಯಗಳನ್ನು ಮತ್ತು ಪ್ರಾಯೋಗಿಕ ನೆಲೆಯಲ್ಲಿ ಕಂಡುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಿಕೊಳ್ಳಲು ಸಿದ್ಧನಿದ್ದೇನೆ ಎಂದಿದ್ದರು.

ಕಾಮೆಂಟ್‌ಗಳಿಲ್ಲ: